Select Your Language

Notifications

webdunia
webdunia
webdunia
webdunia

ಪ್ರೇಮ್-ರಕ್ಷಿತಾ ಲವ್ ಸ್ಟೋರಿಗೆ ಸೃಜನ್ ಹೀರೋ?

ಪ್ರೇಮ್-ರಕ್ಷಿತಾ ಲವ್ ಸ್ಟೋರಿಗೆ ಸೃಜನ್ ಹೀರೋ?
SUJENDRA
ನಿರ್ದೇಶಕ ಪ್ರೇಮ್ ಮತ್ತು ನಟಿ ರಕ್ಷಿತಾ ನಡುವೆ ಪ್ರೇಮಾಂಕುರವಾದಾಗಲೇ ಹಲವರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಒಬ್ಬರು ಉತ್ತರ, ಇನ್ನೊಬ್ಬರು ದಕ್ಷಿಣ -- ಹೀಗಿದ್ದೂ ಇವರು ಒಂದಾಗಿದ್ದು ಹೇಗೆ ಎಂದು ಆಶ್ಚರ್ಯಪಟ್ಟಿದ್ದರು. ಅವರ ಲವ್ ಸ್ಟೋರಿ ಹಿಂದೇನಿದೆ ಎಂಬುದನ್ನು ಪತ್ತೆ ಮಾಡಿ, ಅದೇನೋ ಅದ್ಭುತವಿದೆ ಎಂದು ತೋರಿಸಲು ಹೊರಟಿದ್ದಾರೆ ಒಬ್ಬರು ನಿರ್ದೇಶಕರು.

ಚಿತ್ರದ ಹೆಸರು 'ಆನೆ ಪಟಾಕಿ'. ನಿರ್ದೇಶಕರು ಚಂದ್ರಶೇಖರ್ ಬಂಡಿಯಪ್ಪ. ಕಿರುತೆರೆಯಲ್ಲಿ ರಾಜನಂತೆ ಮಿಂಚುತ್ತಿರುವ ಸೃಜನ್ ಲೋಕೇಶ್ ಈ ಚಿತ್ರದ ಮೂಲಕ ಎರಡನೇ ಬಾರಿ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಅವರಿಗೆ ಜೋಡಿಯಾಗಿ ಜಿಂಕೆಮರಿ ರೇಖಾ ಅಭಿನಯಿಸಬೇಕಿತ್ತು. ಆದರೆ ಅವರ ಬದಲಿಗೆ ಬೇರೊಬ್ಬ ನಟಿಗಾಗಿ ಹುಡುಕಾಟ ನಡೆಯುತ್ತಿದೆ.

ಎಲ್.ಟಿ. ಸುರೇಶ್ ಬಾಬು ನಿರ್ಮಾಣ, ಧರ್ಮ ಅವೀಶ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ ಚಿತ್ರಕ್ಕಿದೆ. ಜೈಜಗದೀಶ್-ವಿಜಯಲಕ್ಷ್ಮಿ ದಂಪತಿ ಚಿತ್ರದಲ್ಲೂ ಗಂಡ-ಹೆಂಡತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಧು ಕೋಕಿಲಾ, ಯತಿರಾಜ್, ತಬಲಾ ನಾಣಿ ಮುಂತಾದವರೂ ನಟಿಸುತ್ತಿದ್ದಾರೆ.

ಪ್ರೇಮ್-ರಕ್ಷಿತಾ ಲವ್ ಸ್ಟೋರಿ?
'ಆನೆ ಪಟಾಕಿ' ನಿರ್ದೇಶಕ ಪ್ರೇಮ್ ಮತ್ತು ನಟಿ ರಕ್ಷಿತಾ ಪ್ರೇಮ ಕಥೆಯೇ? ಮೂಲಗಳ ಪ್ರಕಾರ, ಹೌದು. ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ತಾರಾ ಜೋಡಿಯ ಕಥೆಯನ್ನೇ ಚಂದ್ರಶೇಖರ್ ಬಂಡಿಯಪ್ಪ ಸಿನಿಮಾ ಮಾಡುತ್ತಿದ್ದಾರೆ. ಒಂದಷ್ಟು ಮಸಾಲೆ ಸೇರಿಸಿ ಕಥೆ ಹೆಣೆದಿದ್ದಾರೆ.

ಇದೆಲ್ಲ ನಿಜಾನಾ ಅಂತ ಕೇಳಿದ್ರೆ, ನಿರ್ದೇಶಕರು ಮಾತ್ರ ಬಾಯಿ ಬಿಡುತ್ತಿಲ್ಲ. ಸೃಜನ್ ಲೋಕೇಶ್ ಅಂತೂ 'ಪ್ರೇಮ್ ಅಡ್ಡ'ದಲ್ಲಿ ಪ್ರೇಮ್ ಕಾಣಿಸಿಕೊಂಡಿರುವಂತೆ, 'ಜೋಗಿ'ಯ ಯಾವುದೋ ದೃಶ್ಯ ನೆನಪಿಸುವಂತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಆದರೆ ಯಾರೂ ಇದು ಪ್ರೇಮ್-ರಕ್ಷಿತಾ ಲವ್ ಸ್ಟೋರಿಯ ಸಿನಿಮಾ ಎಂದು ಖಚಿತಪಡಿಸುತ್ತಿಲ್ಲ.

ಹೆಸರಿನ ಪ್ರಾಬ್ಲಮ್ಮು...
ಪ್ರೇಮ್-ರಕ್ಷಿತಾ ಲವ್ ಸ್ಟೋರಿ ಎಂದು ಹೇಳಲಾಗುತ್ತಿರುವ ಇದಕ್ಕೆ ಆರಂಭದಲ್ಲಿ 'ಗೆಂಡೆ ತಿಮ್ಮ' ಎಂದು ಹೆಸರಿಡಲಾಗಿತ್ತು. ನಂತರ ಅದ್ಯಾಕೋ ಸರಿಯಿಲ್ಲ ಅಂತ 'ಆನೆ ಪಟಾಕಿ' ಶೀರ್ಷಿಕೆ ಇಡಲು ನಿರ್ಧರಿಸಲಾಗಿದೆ. ಆದರೆ ಇಲ್ಲೂ ಅಡೆ-ತಡೆಗಳು ಎದುರಾಗಿವೆ. ಕಾರಣ, ಇದನ್ನೇ ಹೋಲುವ ಇನ್ನೊಂದು ಶೀರ್ಷಿಕೆ ಈಗಾಗಲೇ ನೋಂದಣಿ ಆಗಿರುವುದು.

'ಲವ್ ಗುರು' ಖ್ಯಾತಿಯ ಪ್ರಶಾಂತ್ ರಾಜ್ ತನ್ನ ಹೊಸ ಚಿತ್ರಕ್ಕೆ 'ಪಟಾಕಿ' ಅಂತ ಹೆಸರಿಟ್ಟು, ನೋಂದಾವಣಿ ಮಾಡಿಸಿದ್ದಾರೆ. ಇನ್ನೂ ಚಿತ್ರ ಶೂಟಿಂಗ್ ಶುರುವಾಗಿಲ್ಲ, ಸೆಟ್ಟೇರಿಲ್ಲ. ಆದರೂ ನೋಂದಣಿಯಾಗಿರುವುದರಿಂದ, ಅದೇ ಹೆಸರನ್ನು ಹೋಲುವ ಇನ್ನೊಂದು ಶೀರ್ಷಿಕೆ ಕೊಡಲು ಸಾಧ್ಯವಿಲ್ಲ ಎಂದಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಒಂದೆರಡು ದಿನಗಳಲ್ಲಿ ಶೀರ್ಷಿಕೆ ಗೊಂದಲ ನಿವಾರಣೆಯಾಗಲಿದೆ ಎಂಬ ಭರವಸೆಯಲ್ಲಿದ್ದಾರೆ ನಿರ್ದೇಶಕರು.

Share this Story:

Follow Webdunia kannada