Publish Date: Mon, 20 Jun 2022 (07:14 IST)
Updated Date: Mon, 20 Jun 2022 (09:16 IST)
ಬೆಂಗಳೂರು : ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಸ್ವಾಗತಕ್ಕೆ ಕರ್ನಾಟಕ ಸಜ್ಜಾಗಿದೆ.
ಚುನಾವಣಾ ವರ್ಷದ ಆರಂಭದಲ್ಲಿಯೇ ಮೋದಿ ರಾಜ್ಯಕ್ಕೆ ಬರುತ್ತಿರುವುದು ಬಿಜೆಪಿಗರ ಹುಮ್ಮಸ್ಸನ್ನು ಇಮ್ಮಡಿ ಮಾಡಿದೆ. ಸಿಎಂ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಮೋದಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಈ ಪ್ರವಾಸವನ್ನು ಯಶಸ್ವಿಗೊಳಿಸಲು ಇಡೀ ಸರ್ಕಾರ ಶ್ರಮಿಸುತ್ತಿದೆ.
ಮೋದಿ 20 ಗಂಟೆಗಳ ಕಾಲ ರಾಜ್ಯದಲ್ಲಿ ಇರಲಿದ್ದು, ಈ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಯೋಗ ಸೇರಿ 10 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
33 ಸಾವಿರ ಕೋಟಿ ವೆಚ್ಚದ 19 ಯೋಜನೆಗಳಿಗೆ ಚಾಲನೆ ಕೊಡಲಿದ್ದಾರೆ. ಇದಲ್ಲದೇ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ, ಯಶವಂತಪುರ ಮತ್ತು ದಂಡು ರೈಲ್ವೇ ನಿಲ್ದಾಣದ ಅಭಿವೃದ್ಧಿಯೂ ಸೇರಿದೆ.
ಸಂಜೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಫಲಾನುಭವಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ.
ನಂತರ ಸುತ್ತೂರುಮಠ, ಚಾಮುಂಡಿ ಬೆಟ್ಟಕ್ಕೂ ಪ್ರಧಾನಿ ಭೇಟಿ ನೀಡುತ್ತಿದ್ದಾರೆ. ಮೋದಿ ಸಂಚರಿಸುವ ಮಾರ್ಗದ ಎಲ್ಲಾ ಕಾಲೇಜುಗಳಿಗೆ, ಬೆಂಗಳೂರು ವಿವಿಗೆ ರಜೆ ಘೋಷಣೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಉನ್ನತ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ.