Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ಸಭೆಯ ಪೂರ್ತಿ ಹೈಲೈಟ್ಸ್

ಮುಖ್ಯಮಂತ್ರಿ ಸಭೆಯ ಪೂರ್ತಿ ಹೈಲೈಟ್ಸ್
ಬೆಂಗಳೂರು , ಮಂಗಳವಾರ, 10 ಮೇ 2022 (09:35 IST)
ಬೆಂಗಳೂರು : ನನ್ನ ಸರ್ಕಾರ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ.
 
ನೀವೆಲ್ಲರೂ ನನ್ನ (ರಡಾರ್) ಕಣ್ಗಾವಲಿನಲ್ಲಿ ಇದ್ದೀರಿ. ನಿಮ್ಮೆಲ್ಲರನ್ನು ನಾನು ಗಮನಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

1. ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಸಭೆ. ಅಧಿಕಾರದ ವಿಕೇಂದ್ರೀಕರಣವಾಗಿ 3 ದಶಕಗಳ ಮೇಲಾಗಿದೆ. ಅದರ ಲಾಭವನ್ನು ಒಮ್ಮೆ ಹಿಂದುರಿಗಿ ನೋಡಬೇಕಾಗಿದೆ.

ಕೇಂದ್ರೀಕೃತವಾದ ಆಡಳಿತ ಮಾಡಿದರೆ ಜನರಿಗೆ ಆಡಳಿತದ ಲಾಭ, ಸರ್ಕಾರದ ಕಾರ್ಯಕ್ರಮಗಳು ಮುಟ್ಟುವುದಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಜನರಿಂದ ಜನರಿಗೋಸ್ಕರ ಆಡಳಿತವಾಗಬೇಕು. ಅಧಿಕಾರದ ಸುತ್ತಲೂ ಜನ ಓಡಾಡಬಾರದು. ಜನರ ಸುತ್ತಲೂ ಅಭಿವೃದ್ಧಿಯಾಗಬೇಕು ಎನ್ನುವ ಕಲ್ಪನೆ.

2. ಬಡವರ ಪರವಾಗಿ ಕೆಲಸ ಮಾಡಲು ಧೈರ್ಯವಾಗಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯಬಾರದು. ಎಲ್ಲಾ ಜಿ,ಪಂ ಸಿಇಒಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣವೂ ಇರಬೇಕು. ತಪ್ಪಾದರೆ ಕೇಳುವ ನೈತಿಕತೆ ಇರಬೇಕು. ಲಿಂಕ್ ಡಾಕ್ಯುಮೆಂಟ್ ತೆಗೆದು ನೋಡಬೇಕು. ಜಿಲ್ಲಾ ಪಂಚಾಯತ್ ಸ್ವತಂತ್ರ ಸರ್ಕಾರವಿದ್ದಂತೆ.

3. ಸಿಇಓಗಳು ತಮ್ಮ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಅಧಿಕಾರದ ಮಹತ್ವವನ್ನು ಅರಿತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು.

4. ಪಿಡಿಒಗಳನ್ನು ಶಿಸ್ತಿನಲ್ಲಿಡಬೇಕು. ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಬೇಕು. ನಿಮ್ಮ ಪಾತ್ರ, ಕರ್ತವ್ಯ ಹಾಗೂ ಅಧಿಕಾರದ ಬಗ್ಗೆ ಸ್ಪಷ್ಟತೆ ಇರಬೇಕು. ಸರ್ಕಾರದ ಆಯವ್ಯಯದ ಬಹುತೇಕ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್ ಸಿಇಒಗಳು ಅನುಷ್ಠಾನ ಮಾಡುತ್ತಾರೆ.

5. ಬಜೆಟ್ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರೋಡ್ ಮ್ಯಾಪ್ ಮಾಡಿಕೊಳ್ಳಬೇಕು. ಸಿಇಓಗಳು ಜಿಲ್ಲೆಯ ಸಿಎಸ್ (ಮುಖ್ಯ ಕಾರ್ಯದರ್ಶಿಗಳು)ಗಳಂತೆ ಕಾರ್ಯ ನಿರ್ವಹಿಸಬೇಕು.

6. ಜಿಲ್ಲೆಗಳಲ್ಲಿ ಮನೆ ನಿರ್ಮಾಣ, ಫಲಾನುಭವಿಗಳ ಆಯ್ಕೆ ಶೀಘ್ರವಾಗಿ ಮುಗಿಸಬೇಕು. ಪಡಿತರ ಚೀಟಿ ವಿತರಣೆ, ಶಾಲಾ ಕೊಠಡಿಗಳು, ಆಸ್ಪತ್ರೆಗಳ ವಸ್ತುಸ್ಥಿತಿ ಬಗ್ಗೆ ವರದಿ ನೀಡಬೇಕು.

7. ಆಯಾ ವರ್ಷದ ಕ್ರಿಯಾ ಯೋಜನೆಗಳು ಅದೇ ವರ್ಷದಲ್ಲಿ ಅನುಷ್ಠಾನವಾಗುವುದಿಲ್ಲ. ಅನುಷ್ಠಾನ ಅವಧಿ 10 ತಿಂಗಳೊಳಗೆ ಆಗಬೇಕು ಕಾಲಮಿತಿಯೊಳಗೆ ಕಾರ್ಯಕ್ರಮಗಳ ಅನುಷ್ಠಾನವಾಗಬೇಕೆಂಬ ಧ್ಯೇಯವಿರಬೇಕು. ಯೋಜನೆಯ ಅನುಷ್ಠಾನದ ಎಲ್ಲ ಹಂತಗಳ ಬಗ್ಗೆ ಗಮನಹರಿಸಬೇಕು.

8. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಯ ಯೋಜನೆಗಳೇ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ನಿರ್ಭರವಾಗಿದೆ. ಇವುಗಳ ಶೀಘ್ರ ಅನುಷ್ಠಾನಕ್ಕೆ ಗಮನಹರಿಸಬೇಕು.

9. ಗ್ರಾಮಪಂಚಾಯತಿಗಳ ಪರಿಶೀಲನೆ ನಡೆಸಬೇಕು. ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ಕಚೇರಿಗಳಿಗೆ ಸೀಮಿತವಾಗದೇ ಸ್ಥಳಗಳಿಗೆ ತೆರಳಿ ಪರಿಶೀಲನೆಗಳನ್ನು ಮಾಡಬೇಕು.

10. ರಾಯಚೂರಿನಲ್ಲಿ ಇಷ್ಟು ವರ್ಷಗಳ ಕಾರ್ಯಕ್ರಮಗಳ ಹೊರತಾಗಿಯೂ ಅನೀಮಿಯಾ ಪ್ರಮಾಣದಲ್ಲಿ ಹೆಚ್ಚಳವಿದೆ.

11. ಅಪೌಷ್ಟಿಕತೆ ನಿವಾರಣೆಗೆ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ.

12. ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗದ ಯೋಜನೆಗಳು ನಿಗದಿತ ಅವಧಿಯಲ್ಲಿ ಮುಗಿಯಲೇಬೇಕು. ತಳಹಂತದ ಜನರ ಬದುಕನ್ನು ಬದಲಿಸುವ ಇಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಬೇಕು.

13. ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗದ ಅಭಿವೃದ್ಧಿ ಕಾರ್ಯಕ್ರಮಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಅಪೌಷ್ಟಿಕತೆ ನಿವಾರಣೆ ಬಗ್ಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು.

14. ಜಿಲ್ಲೆಗಳಲ್ಲಿ ಇರುವ ಅಪೌಷ್ಟಿಕತೆಯ ಮಟ್ಟ , ಎಂಎಂಆರ್, ಐಎಂಆರ್ ಗಳ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಸರಾಸರಿ ಪೌಷ್ಟಿಕತೆಯ ಮಟ್ಟವನ್ನು ತಲುಪಲು ಸಿಇಓಗಳು ಶ್ರಮಿಸಬೇಕು.

15. ಜಿಲ್ಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆಗಳ ಬಗ್ಗೆ ಗಮನಹರಿಸಿ ಇವುಗಳನ್ನು ಅಭಿವೃದ್ಧಿಗೊಳಿಸಲು ಶಾಲೆಗಳಲ್ಲಿ ಆರೋಗ್ಯ ಶಿಬಿರ,ಆಸ್ಪತ್ರೆಗಳ ಸಹಕಾರ ಪಡೆದು ಕಾರ್ಯಕ್ರಮಗಳನ್ನು ಮಾಡಬೇಕು.

16. ಇಂದಿನಿಂದ ಬದಲಾವಣೆಯಾಗಬೇಕು. ಬದಲಾವಣೆ ಎಲ್ಲರಿಂದಲೂ ಆಗಬೇಕು. ಜನಕ್ಕೆ ಈ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ಮಾಡಬೇಕು. ಸಾಮಾಜಿಕ ಮತ್ತು ಅಭಿವೃದ್ಧಿಯ ಹೊಣೆಗಾರಿಕೆ ಇದೆ.

17. 100 ಪಶು ಚಿಕಿತ್ಸಾಲಯ, 70 ಗೋಶಾಲೆ ನಿರ್ಮಾಣ, ಪುಣ್ಯಕೋಟಿ ದತ್ತು ಯೋಜನೆ, ಕರಾವಳಿಯಲ್ಲಿ ಸಮುದ್ರದಾಳದಲ್ಲಿ ಮೀನುಗಾರಿಕೆ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ , ಅಪೌಷ್ಟಿಕತೆ ನಿವಾರಣೆಗೆ ಎಸ್.ಡಿ ಪಿಯಲ್ಲಿ , ಕೆಕೆಆರ್ ಡಿಬಿ ಮೂಲಕ ಅನುದಾನ ಒದಗಿಸಿದೆ.

18. ಸುಮಾರು 7000 ಶಾಲಾ ಕೊಠಡಿಗಳ ನಿರ್ಮಾಣ ಸರ್ಕಾರದ ಬೃಹತ್ ಕಾರ್ಯಕ್ರಮವಾಗಿದ್ದು, ಸೂಕ್ತ ರೀತಿಯಲ್ಲಿ ಆಯ್ಕೆ ಮತ್ತು ಅನುಷ್ಠಾನ ಆಗಬೇಕು. ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು.

19. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಸಮಾಜ ಕಲ್ಯಾಣ ಇಲಾಖೆಯಡಿ 100 ವಸತಿ ನಿಲಯಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 50 ವಸತಿ ನಿಲಯಗಳ ನಿರ್ಮಾಣ ಆದ್ಯತೆ ಮೇರೆಗೆ ಕೈಗೊಳ್ಳುವುದು.

20. ನಗರಗಳಲ್ಲಿ ನಮ್ಮ ಕ್ಲಿನಿಕ್ ಅನುಷ್ಠಾನ, ಮುಖ್ಯಮಂತ್ರಿ ವಿದ್ಯಾರ್ಥಿ ಮಾಗದರ್ಶಿನಿ ವೆಬ್ ಸೈಟ್ ಕುರಿತು ಬಡಮಕ್ಕಳಿಗೆ ಮಾರ್ಗದರ್ಶನ ನೀಡಿ.

21. ಮುಖ್ಯಮಂತ್ರಿ ಆರೋಗ್ಯ ವಾಹಿನಿ ಬೀದರ್, ಹಾವೇರಿ, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಸಿಇಓಗಳು ಗಮನ ಹರಿಸಬೇಕು.

22. ಪೌಷ್ಟಿಕ ಕರ್ನಾಟಕ ಅಭಿಯಾನಕ್ಕೆ ಎಸ್ ಡಿ ಪಿ ಹಾಗೂ ಕೆಕೆಆರ್ ಡಿಬಿಯಡಿ ವಿಶೇಷ ಅನುದಾನ ಬಿಡುಗಡೆಯಾಗುತ್ತಿದ್ದು, ತೀವ್ರ ಹಾಗೂ ಸಾಧಾರಣ ಅಪೌಷ್ಟಿಕತೆ ಇರುವ ಜಿಲ್ಲೆಗಳಿಗೆ ಒಂದೇ ರೀತಿಯ ಆಹಾರ ನೀಡುವುದು.

23. ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ವಿಶೇಷ ಗಮನ ಹರಿಸುವುದು. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಬೇಕು. ಗ್ರಾಮ ಒನ್ ಜನೋಪಯೋಗಿ ಕಾರ್ಯಕ್ರಮವಾಗಿದ್ದು ಯಶಸ್ವಿಗೊಳಿಸಬೇಕು. ಇದರಿಂದ ಮೇಲಿನ ಹಂತದಲ್ಲಿ ಅರ್ಜಿಗಳ ಹೊರೆ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸಲ್ಲ : ಸಿಎಂ