Publish Date: Mon, 25 Oct 2021 (11:23 IST)
Updated Date: Mon, 25 Oct 2021 (11:26 IST)
ಬೆಂಗಳೂರು : ಇಂದಿನಿಂದ 1 ರಿಂದ 5ನೇ ತರಗತಿವರೆಗಿನ ಶಾಲೆಗಳು 20 ತಿಂಗಳು ಬಳಿಕ ಆರಂಭಗೊಳ್ಳುತ್ತಿವೆ.
ಈಗಾಗಲೇ ಕಾಲೇಜು, ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಲಸಿಕೆ ಬಂದರೂ ಕೊರೊನಾ ಆತಂಕ ಇನ್ನು ಕಡಿಮೆ ಆಗಿಲ್ಲ. ಕೊರೊನಾ ಹಿನ್ನೆಲೆ ಸರ್ಕಾರ ಸಹ ಎಲ್ಲ ಮುಂಜಾಗ್ರತ ಕ್ರಮಗಳೊಂದಿಗೆ ಶಾಲೆ ಆರಂಭಿಸೋದಾಗಿ ಹೇಳಿದೆ. ಹಾಗಾಗಿ ಭಾನುವಾರವೇ ಶಾಲೆಗಳನ್ನು ಶುಚಿಗೊಳಿಸಲಾಗಿತ್ತು. ಬೇಗ ಮಕ್ಕಳನ್ನ ಶಾಲೆಗೆ ವಾಪಸ್ ಕರೆಸಿಕೊಳ್ಳಬೇಕು. ಆನ್ ಲೈನ್ ತರಗತಿ ನಿಲ್ಲಿಸಿ, ಬೌತಿಕ ತರಗತಿಗಳನ್ನ ಶುರು ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಇಂದಿನಿಂದ 1 ರಿಂದ 5ನೇ ತರಗತಿವೆರೆಗೆ ಶಾಲೆ ಆರಂಭವಾಗುತ್ತಿದೆ.
ಮಧ್ಯಾಹ್ನದವರೆಗೆ ಮಾತ್ರ ಕ್ಲಾಸ್
ಆರಂಭದಲ್ಲೇ ಮಕ್ಕಳಿಗೆ ಪೂರ್ಣಾವಧಿ ತರಗತಿಗಳು ಇರುವುದಿಲ್ಲ. ಈಗಾಗಲೇ ಕೊರೋನಾ ಹಾಗೂ ಇನ್ನಿತರ ವಿಚಾರಗಳಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ ಏಕಾಏಕಿಯಾಗಿ ಪೂರ್ಣಾವಧಿ ತರಗತಿಗಳು ಮಾಡದೆ ಮಧ್ಯಾಹ್ನದವರೆಗೆ ಮಾತ್ರ ಕ್ಲಾಸ್ ನಡೆಸಲು ಇಲಾಖೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಮನಸ್ಥಿತಿ ಅರಿತುಕೊಂಡು ತಜ್ಞರ ಅಭಿಪ್ರಾಯ ಪಡೆದು ತರಗತಿ ಅವಧಿ ವಿಸ್ತರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ. ಜೊತೆಗೆ ಇಂದಿನಿಂದ ಬಿಸಿಯೂಟ ಕಾರ್ಯಕ್ರಮಕ್ಕೂ ಶಿಕ್ಷಣ ಇಲಾಖೆ ಚಾಲನೆ ನೀಡಲಾಗಿದೆ. ಕೊರೊನಾ ಹಿನ್ನೆಲೆ ಬಿಸಿಯೂಟ ಕಾರ್ಯಕ್ರಮ ನಿಲ್ಲಿಸಲಾಗಿತ್ತು.