Publish Date: Sat, 13 Nov 2021 (09:24 IST)
Updated Date: Sat, 13 Nov 2021 (09:29 IST)
ತಮಿಳುನಾಡು ಜಲಾವೃತವಾಗಿದೆ. ಮುಂದಿನ ಐದು ದಿನಗಳು ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ ಕೇರಳದಲ್ಲೂ ಕೂಡ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಇಂದು ಒಟ್ಟು 6 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ನಾಳೆ (ನವೆಂಬರ್ 14) ಐದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರಲಿದೆ. ಅಂದರೆ ವಿಪರೀತ ಮಳೆಯಾಗುವ ಸೂಚನೆ ಇದಾಗಿದೆ.
ಇಂದು ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಆಲಪ್ಪುಳ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರಲಿದ್ದು, ನಾಳೆ ಪಥನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಇಡುಕ್ಕಿಯಲ್ಲಿ ಮಳೆ ವಿಪರೀತವಾಗಿ ಬಿದ್ದರೆ ಇಂದು ಅಥವಾ ನಾಳೆ ಚೆರುತೋನಿ ಅಣೆಕಟ್ಟಿನ ಗೇಟ್ ತೆರೆಯಲಾಗುವುದು ಎಂದು ಇಡುಕ್ಕಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಂತೂ ಧಾರಾಕಾರ ಮಳೆ ಸುರಿಯಲು ಶುರುವಾಗಿ ವಾರವೇ ಆಯಿತು. ಇಲ್ಲಿ ಮಳೆಯಿಂದ ಆದ ಅನಾಹುತಕ್ಕೆ ಇದುವರೆಗೆ 14 ಮಂದಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದೆ. ಕರ್ನಾಟಕದಲ್ಲಿ ಕೆಲವೆಡೆ ಇಬ್ಬನಿ ಸಹಿತ, ಚಳಿಯ ವಾತಾವರಣ ಇದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ನಿನ್ನೆ ಕರ್ನಾಟಕದಲ್ಲಿ ವಿವಿಧೆಡೆ ಚದುರಿದ ಮಳೆಯಾಗಿದೆ. ಇದು ಇನ್ನೂ 5ದಿನಗಳ ಕಾಲ ಮುಂದುವರಿಯಲಿದೆ.