Publish Date: Sat, 25 Dec 2021 (06:55 IST)
Updated Date: Sat, 25 Dec 2021 (08:59 IST)
ಬೆಂಗಳೂರು : ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಗಳು ಏಕಾಏಕಿ ಕರೆ ಕೊಟ್ಟ ಕರ್ನಾಟಕ ಬಂದ್ಗೆ ಅಪಸ್ವರ ವ್ಯಕ್ತವಾಗುತ್ತಲೇ ಇದೆ.
ಹತ್ತು ಹಲವು ಸಂಘಟನೆಗಳು ಬಂದ್ ಪರವಾಗಿಲ್ಲ. ಕೇವಲ ನೈತಿಕ ಬೆಂಬಲ ಕೊಡುತ್ತೇವೆ ಎನ್ನುತ್ತಿವೆ. ಈ ಸಾಲಿಗೆ ಈಗ ಚಿತ್ರೋದ್ಯಮ ಕೂಡ ಸೇರಿದೆ. ಮೊನ್ನೆ ಬಂದ್ ಘೋಷಣೆ ಮಾಡಿದ್ದ ಸಾರಾ ಗೋವಿಂದು, ಚಿತ್ರೋದ್ಯಮದ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದರು.
ಈ ಘೋಷಣೆಗೆ ಮುನ್ನ, ಫಿಲಂ ಚೇಂಬರ್ ಜೊತೆಯಾಗಲಿ, ಚಿತ್ರೋದ್ಯಮದ ಗಣ್ಯರ ಜೊತೆ ಸಾರಾ ಗೋವಿಂದು ಚರ್ಚೆ ನಡೆಸಿರಲಿಲ್ಲ. ಈ ಬೆನ್ನಲ್ಲೇ ಇಂದು ಸಭೆ ಸೇರಿದ್ದ ಫಿಲ್ಮ್ ಚೇಂಬರ್ ಬಂದ್ನಲ್ಲಿ ಚಿತ್ರೋದ್ಯಮ ಭಾಗಿ ಆಗಲ್ಲ. ಆದರೆ ಬಂದ್ಗೆ ನೈತಿಕ ಬೆಂಬಲ ಇರಲಿದೆ. ಡಿ.31ರಂದು ಚಿತ್ರರಂಗದ ಎಲ್ಲಾ ಚಟುವಟಿಕೆ ನಡೆಯಲಿವೆ ಎಂದು ಘೋಷಿಸಿತು.
ಬಂದ್ಗೆ ಚಿತ್ರೋದ್ಯಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಒತ್ತಾಯಿಸಿ ಫಿಲ್ಮ್ ಚೇಂಬರ್ ಮುಂದೆ ನಾಳೆ ಪ್ರತಿಭಟನೆ ನಡೆಸಲು ಕನ್ನಡ ಪರ ಸಂಘಟನೆಗಳು ತೀರ್ಮಾನಿಸಿವೆ.
ಈ ಮಧ್ಯೆ ಮೈಸೂರಲ್ಲಿ ಮಾತನಾಡಿದ ನಟ ಶಿವಣ್ಣ, ಫಿಲಂ ಚೇಂಬರ್ ನಿರ್ಧಾರಕ್ಕೆ ನಾವು ಬದ್ಧ ಎಂದು ಘೋಷಿಸಿದ್ದಾರೆ. ಪರೋಕ್ಷವಾಗಿ ಬಂದ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಯಕರ್ನಾಟಕ ಸಂಘಟನೆ ಬಂದ್ಗೆ ನೀಡಿದ್ದ ಬೆಂಬಲ ಹಿಂಪಡೆದಿದೆ. ಈಗಾಗಲೇ, ಕರವೇ ನಾರಾಯಣಗೌಡ ಕೂಡ ಬಂದ್ಗೆ ಬೆಂಬಲ ಇಲ್ಲ ಎಂದಿದ್ದಾರೆ.