Publish Date: Sun, 23 Jan 2022 (07:02 IST)
Updated Date: Sun, 23 Jan 2022 (10:04 IST)
ಬೆಂಗಳೂರು : ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು ಸರಿಯಲ್ಲ ಎಂದು ಖ್ಯಾತ ವೈದ್ಯ ಹಾಗೂ ಕೋವಿಡ್ ನಿಗ್ರಹ ಕಾರ್ಯದಿಂದ ರಾಷ್ಟ್ರದ ಗಮನ ಸೆಳೆದ ಡಾ. ಅನಿಲ್ ಕುಮಾರ್ ಅವುಲಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಕೋವಿಡ್ ಸಂದರ್ಭದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಜ್ಞ ವೈದ್ಯರ ಜೊತೆಗಿನ ಸಂವಾದ ಸರಣಿಯಲ್ಲಿ ಮೂರನೇ ಅಲೆಯ ಆತಂಕದ ಬಗ್ಗೆ ಡಾ.ಅನಿಲ್ಕುಮಾರ್ ಮಾತನಾಡಿದರು.
''ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿಯೇ ಹೆಚ್ಚಿರುತ್ತದೆ. ಮಕ್ಕಳಿಗೆ ಲಸಿಕೆ ಹಾಕುವುದನ್ನು ಸರ್ವೋಚ್ಚ ನ್ಯಾಯಾಲಯ ಸಹ ಕಡ್ಡಾಯ ಮಾಡಿಲ್ಲ. ಪೋಷಕರೇ ಈ ಬಗ್ಗೆ ನಿರ್ಧರಿಸಲು ಅನುಮತಿ ನೀಡಿದೆ. ಹೀಗಿರುವಾಗ ರಾಜ್ಯದ ಎಲ್ಲೆಡೆ ಶಾಲೆಗಳು ಲಸಿಕೆಯನ್ನು ಕಡ್ಡಾಯವಾಗಿ ಹೇರುತ್ತಿರುವುದು ತಪ್ಪು'' ಎಂದು ಅಭಿಪ್ರಾಯಪಟ್ಟರು.
''ಮೂರನೇ ಅಲೆಯನ್ನು ಎದುರಿಸಲು ಬೂಸ್ಟರ್ ಡೋಸ್ (ಮುನ್ನೆಚ್ಚರಿಕೆ ಲಸಿಕೆ)ಅಗತ್ಯವೆಂದು ಮಾಡಿರುವ ಪ್ರಚಾರದ ಬಗ್ಗೆ ಮಾತನಾಡಿದ ಅವರು ''ಬೂಸ್ಟರ್ಡೋಸ್ ಕಡ್ಡಾಯವೇನಲ್ಲ. ಮೂರನೆ ಅಲೆ ಪ್ರಾಣಾಪಕಾರಿಯಾಗಿ ಪರಿವರ್ತನೆಯಾಗಿಲ್ಲ. ಎರಡನೆಯ ಅಲೆಯಂತಹ ಆತಂಕ ಇದರಲ್ಲಿ ಕಾಣಿಸಿಲ್ಲ.
ಮೂರನೆ ಅಲೆ ಅತಿ ವೇಗವಾಗಿ ಹರಡುವ ಗುಣ ಹೊಂದಿದೆ. ಆದರೆ ಪ್ರಾಣಕ್ಕೆ ಕುತ್ತು ತರುವುದಿಲ್ಲ. ಸಾಂಕ್ರಾಮಿಕ ರೋಗಗಳು ಹೊಸ ರೂಪ ಪಡೆಯುತ್ತಾ ಹೋಗುತ್ತವೆ. ಆದರೆ ಕ್ರಮೇಣ ಅದರ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ''