Publish Date: Thu, 24 May 2018 (08:58 IST)
Updated Date: Thu, 24 May 2018 (08:59 IST)
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸೂಕ್ತ ಹುದ್ದೆ ಸಿಗದ ನಿರಾಶೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು ಸಹೋದರ ಡಿಕೆ ಸುರೇಶ್ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ.
ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್, ಕೆಸಿ ವೇಣುಗೋಪಾಲ್ ಮುಂತಾದ ನಾಯಕರ ಎದುರೇ ಡಿಕೆಶಿ ಸಹೋದರರು ಕೂಗಾಡಿದ್ದಾರೆ ಎಂದು ಕೆಲವು ಖಾಸಗಿ ವಾಹಿನಿಗಳು ವರದಿ ಮಾಡಿವೆ.
‘ಬಾಗಿಲು ಕಾಯೋಕೆ ಮಾತ್ರ ನಾವು, ಅಧಿಕಾರ ಅನುಭವಿಸೋಕೆ ಬೇರೆಯವರು ಯಾಕೆ?’ ಎಂದು ಡಿಕೆ ಸಹೋದರರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಆಪರೇಷನ್ ಕಮಲಕ್ಕೆ ತುತ್ತಾಗದಂತೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಡಿಕೆ ಸಹೋದರರು ಪರಿಶ್ರಮ ಪಟ್ಟಿದ್ದರು. ಅವರ ಪರಿಶ್ರಮಕ್ಕೆ ಮೈತ್ರಿ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಬೆಲೆ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕೆ ಹೈಕಮಾಂಡ್ ಒಪ್ಪಿಲ್ಲ.
ಈ ಹಿನ್ನಲೆಯಲ್ಲಿ ಡಿಕೆ ಸಹೋದರರು ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದಾಗ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಡಿಕೆಶಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೂ ಎಂದಿನಂತೆ ನಗುಮೊಗದಿಂದಲೇ ಹಾಜರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.