Publish Date: Tue, 10 Jan 2023 (10:56 IST)
Updated Date: Tue, 10 Jan 2023 (10:24 IST)
ಬೆಂಗಳೂರು : ಚಳಿ ಅಬ್ಬರಕ್ಕೆ ಉತ್ತರ ಭಾರತ ಅಕ್ಷರಶಃ ತತ್ತರಿಸುತ್ತಿದೆ. ಈ ಭಾಗದಲ್ಲಿ ಅನೇಕ ಸಾವು-ನೋವುಗಳು ಕೂಡ ಸಂಭವಿಸಿವೆ. ಈ ನಡುವೆ ಬೆಂಗಳೂರಿಗೂ ಕೊರೆವ ಚಳಿಯ ಎಫೆಕ್ಟ್ ತಟ್ಟಿದ್ದು, ಸಿಲಿಕಾನ್ ಸಿಟಿ ಜನ ಥಂಡಾ ಹೊಡೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಈ ಬಾರಿ ದೇಶದಲ್ಲಿ ಚಳಿಯ ಆರ್ಭಟ ವಾಡಿಕೆಗಿಂತಲೂ ಕೊಂಚ ಜೋರಾಗಿಯೇ ಇದೆ. ಉತ್ತರ ಭಾರತದಲ್ಲಿ ಚಳಿಯ ಅಬ್ಬರಕ್ಕೆ ಅನೇಕರು ಪ್ರಾಣ ತೆತ್ತಿದ್ದಾರೆ. ಈ ನಡುವೆ ರಾಜ್ಯದಲ್ಲೂ ಚಳಿ ಕಾಟ ಕಳೆದ ಕೆಲ ದಿನಗಳಿಂದ ಹೆಚ್ಚಾಗಿದ್ದು, ಬಹುತೇಕ ಕಡೆ ಕನಿಷ್ಠ ಉಷ್ಣಾಂಶ ಕೂಡ ಗಮನಾರ್ಹವಾಗಿ ಇಳಿಕೆ ಕಂಡಿದೆ.
ಸಿಲಿಕಾನ್ ಸಿಟಿಯಲ್ಲೂ ಕೂಡ ಈ ಬಾರಿ ಚಳಿಯ ಎಫೆಕ್ಟ್ ಬೆಳ್ಳಂಬೆಳಗ್ಗೆ ಜನ ಆಚೆ ಬರಲು ಯೋಚನೆ ಮಾಡುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಚಳಿ ಜಾಸ್ತಿಯಾಗಿದ್ದು, ವಾಡಿಕೆಗಿಂತಲೂ ಹೆಚ್ಚಿನ ಚಳಿ ಜನರನ್ನ ಹೈರಾಣಾಗಿಸಿದೆ. ಬೆಳ್ಳಂಬೆಳಗ್ಗೆ ಚಳಿ ಜೊತೆ ಮಂಜು ಕೂಡ ದಟ್ಟವಾಗುತ್ತಿದ್ದು, ಕೆಲವೊಮ್ಮೆ ಸಂಜೆ ವೇಳೆಯೂ ಮಂಜಿನ ಎಫೆಕ್ಟ್ ಜನರಿಗೆ ಜೋರಾಗಿಯೇ ತಟ್ಟುತ್ತಿದೆ.
ಇನ್ನೂ ವಾಡಿಕೆಯಂತೆ ಜನವರಿ ತಿಂಗಳಲ್ಲಿ ಬೆಂಗಳೂರಿನ ಕನಿಷ್ಠ ತಾಪಮಾನ 16 ರಿಂದ 17 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುತ್ತಿತ್ತು. ಆದರೆ ಈ ಬಾರಿ 14 ಡಿಗ್ರಿಗೆ ಕುಸಿತ ಕಂಡಿದೆ. ಇನ್ನೂ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 13 ಡಿಗ್ರಿ ಇದ್ರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12.4 ಡಿಗ್ರಿಗೆ ಕುಸಿತ ಕಂಡಿದೆ.