Publish Date: Thu, 21 Jun 2018 (09:42 IST)
Updated Date: Thu, 21 Jun 2018 (09:44 IST)
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಖತಂಗೊಳಿಸಿ ಸಮ್ಮಿಶ್ರ ಸರ್ಕಾರಕ್ಕೆ ಗುಡ್ ಬೈ ಹೇಳಿದಾಗ ಏನೋ ಬಲವಾದ ಕಾರಣವಿರಲೇಬೇಕು ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು.
ಅದೀಗ ನಿಜವಾಗುವ ಲಕ್ಷಣ ಕಾಣುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಭಾರೀ ಪ್ಲ್ಯಾನ್ ರೂಪಿಸಿದೆ ಎಂಬ ವದಂತಿಗೆ ಇದೀಗ ಸೇನಾ ಮುಖ್ಯಸ್ಥರ ಹೇಳಿಕೆ ಪುಷ್ಠಿ ನೀಡಿದೆ.
ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರುವ ಮೂಲಕ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಮಾಡುವ ಕೇಂದ್ರ ನಾಯಕರ ಯೋಜನೆಗೆ ಸ್ಪಷ್ಟ ರೂಪ ಸಿಗುತ್ತಿದೆ. ಇಲ್ಲಿ ಸೈನಿಕರ ಮೇಲೆಯೇ ಕಲ್ಲೆಸೆತ, ಉಗ್ರರ ಉಪಟಳ ಹೆಚ್ಚಳವಾದ ಹಿನ್ನಲೆಯಲ್ಲಿ ಪೊಲೀಸರು ಮತ್ತು ಸೇನೆ ಜಂಟಿಯಾಗಿ ಕಾರ್ಯಾಚರಣೆಗಿಳಿಯಲಿದೆ ಎನ್ನಲಾಗಿದೆ.
ಇದಕ್ಕಾಗಿಯೇ ರಾಜ್ಯಪಾಲರ ಆಡಳಿತ ಹೇರಲಾಗಿದೆ. ರಾಜ್ಯಪಾಲ ಎನ್ ಎನ್ ವೋಹ್ರಾ ಅಧಿಕಾರ ಸ್ವೀಕರಿಸುತ್ತಿದ್ದಂತೇ ಉಗ್ರರ ವಿರುದ್ಧ ಶೀಘ್ರವೇ ಸೇನಾ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ. ಹೀಗಾಗಿ ಉಗ್ರರ ಮಟ್ಟ ಹಾಕುವುದಕ್ಕೆ ನೇರವಾಗಿ ಕೇಂದ್ರವೇ ಇಂತಹದ್ದೊಂದು ಯೋಜನೆ ರೂಪಿಸಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.