Publish Date: Wed, 19 Jan 2022 (09:12 IST)
Updated Date: Wed, 19 Jan 2022 (11:17 IST)
ಬೆಂಗಳೂರು : ಸುಮಾರು 11, 12 ದಿನ ಮನೇಲಿದ್ದೆ, ಕ್ವಾರಂಟೈನ್ ಮುಗಿದಿದೆ. ಇಂದಿನಿಂದ ಕಚೇರಿಯಲ್ಲಿ ಕೆಲಸ ಮಾಡ್ತೇನೆ. ನಿನ್ನೆ ಡಿಸಿಗಳ ಜೊತೆ ಸಭೆ ನಡೆಸಿದ್ದೇನೆ.
ಹಾಲಿ ನಿರ್ಬಂಧಗಳ ಪುನರ್ ಪರಿಶೀಲನೆ ಹಾಗೂ ಲಸಿಕೆ ಬಗ್ಗೆ ವಿಶೇಷ ಗಮನ ಕೊಡಲು ಸೂಚಿಸಿದ್ದೇನೆ. ಶುಕ್ರವಾರ ಮತ್ತೆ ತಜ್ಞರ ಜೊತೆಗೆ ಸಭೆ ಮಾಡ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ ವಾಪಸ್, ನಿರ್ಬಂಧಗಳ ಸಡಿಲಿಕೆ ಬಗ್ಗೆ ತಜ್ಞರ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜನವರಿ ಅಂತ್ಯಭಾಗದಿಂದ ಫೆಬ್ರವರಿ ಮಧ್ಯಭಾಗದವರೆಗೂ ಕೋವಿಡ್ ಹೆಚ್ಚಾಗುತ್ತೆ ಅಂತ ತಜ್ಞರು ಅಂದಾಜು ಮಾಡಿದ್ದಾರೆ.
ಹೋಂ ಐಸೋಲೇಷನ್ನಲ್ಲಿ 94% ಸೋಂಕಿತರು ಇದ್ದಾರೆ. ಇವರ ಮೇಲೆ ಹೆಚ್ಚಿನ ಗಮನ ಕೊಡಲು ಸೂಚಿಸಲಾಗಿದೆ. ಬೂಸ್ಟರ್ ಡೋಸ್ ಕಡೆ ಗಮನ ಕೊಡಲು ಸೂಚಿಸಿದ್ದೇನೆ. ಜಿಲ್ಲಾಡಳಿತಗಳಿಗೆ ಈ ಎಲ್ಲ ಸೂಚನೆ ನೀಡಲಾಗಿದೆ. ಕೊರೊನಾ ವಾರಿಯರ್ಸ್ ಬಗ್ಗೆ ತೀವ್ರ ಗಮನ ಕೊಡಲು ಸೂಚನೆ ನೀಡಿದ್ದೇನೆ.