Publish Date: Fri, 20 Aug 2021 (10:33 IST)
Updated Date: Fri, 20 Aug 2021 (10:35 IST)
ಕಳೆದ ಏಪ್ರಿಲ್, ಮೇನಲ್ಲಿ ಕೊರೊನಾ ಎರಡನೇ ಅಲೆಯಿಂದ ತತ್ತರಿಸಿದ ಆತಂಕವು ಮಾಸವು ಮುನ್ನವೇ ರಾಜಧಾನಿ ಬೆಂಗಳೂರು ನಗರವನ್ನು ಮತ್ತೊಂದು ಕೊರೊನಾ ಅಲೆಯ ಭೀತಿ ನಿಧಾನವಾಗಿ ಆವರಿಸಲು ಆರಂಭವಾದಂತೆ ಕಾಣುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಐದು ದಿನಗಳಲ್ಲಿ ಸುಮಾರು 250 ಮಕ್ಕಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಇದರಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರವು ಕೂಡಲೇ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ತುರ್ತು ಸೌಲಭ್ಯಗಳನ್ನು ನಗರದ ಎಲ್ಲ ಆಸ್ಪತ್ರೆಗಳಲ್ಲಿ ಸಿದ್ಧವಾಗಿರಿಸಲು ಖಡಕ್ ಆದೇಶ ಹೊರಡಿಸಿದೆ. ಅದರ ಜತೆಗೆ 15 ಲಕ್ಷ ಮಕ್ಕಳಿಗೆ ಕೊರೊನಾ ತಪಾಸಣೆ ನಡೆಸಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಶೀಘ್ರವೇ 'ಆರೋಗ್ಯ ನಂದನ 'ಎಂಬ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು, ಸಂಭಾವ್ಯ ಕೊರೊನಾ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಚುರುಕುಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ನಗರದ ದಕ್ಷಿಣ ಭಾಗದಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಲ್ಲಿ ಅವರನ್ನು ಐಸೊಲೇಷನ್ನಲ್ಲಿ ಇರಿಸಿ, ಅಗತ್ಯ ಚಿಕಿತ್ಸೆ ನೀಡಲು ವಿಶೇಷ ಶಿಶು ಕೋವಿಡ್ ಕೇರ್ ಕೇಂದ್ರ (ಸಿಸಿಸಿ) ಸ್ಥಾಪಿಸಲಾಗಿದೆ. ಎನ್ಜಿಒಗಳ ಸಹಾಯದಿಂದ ಬಿಬಿಎಂಪಿಯು ಈ ಕೇಂದ್ರ ತೆರೆದಿದೆ. ನಗರದಲ್ಲಿ ಸೋಂಕಿತರ ಪೈಕಿ ಶೇ. 11ರಷ್ಟು ಮಂದಿ 18 ವರ್ಷವೊಳಗಿನ ಮಕ್ಕಳಾಗಿದ್ದಾರೆ ಎಂದು ತಿಳಿದುಬಂದಿದೆ