Publish Date: Fri, 18 May 2018 (08:53 IST)
Updated Date: Fri, 18 May 2018 (08:55 IST)
ನವದೆಹಲಿ: ರಾಜ್ಯದಲ್ಲಿ ಬಹುಮತವಿಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿರುವ ರಾಹುಲ್ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ತಿರುಗೇಟು ಕೊಟ್ಟಿದ್ದಾರೆ.
ಸರಣಿ ಟ್ವೀಟ್ ಮೂಲಕ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ನಾಯಕರಿಗೆ ತಿರುಗೇಟು ಕೊಟ್ಟಿರುವ ಅಮಿತ್ ಶಾ ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಯನ್ನು ನೆನಪಿಸಿ ಟಾಂಗ್ ಕೊಟ್ಟಿದ್ದಾರೆ.
‘ಬಹುಶಃ ಕಾಂಗ್ರೆಸ್ ಅಧ್ಯಕ್ಷರಿಗೆ ತಮ್ಮ ಪಕ್ಷದ ಇತಿಹಾಸ ನೆನಪಿಗೆ ಬರುತ್ತಿಲ್ಲ. ರಾಹುಲ್ ಗಾಂಧಿಯ ಹಿರಿಯ ತಲೆಮಾರಿನವರು ತುರ್ತು ಪರಿಸ್ಥಿತಿ ಹೇರಿ, ಸಂವಿಧಾನದ 356 ನೇ ವಿಧಿಯನ್ನು ತಪ್ಪಾಗಿ ಬಳಸಿ, ನ್ಯಾಯಾಲಯ, ಮಾಧ್ಯಮ ಮತ್ತು ನಾಗರಿಕ ಸಮಾಜದ ಮೇಲೆ ದೌರ್ಜನ್ಯವೆಸಗಿದ್ದನ್ನು ಅವರು ಮರೆತಿದ್ದಾರೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ, 78 ಮತ್ತು 37 ಸ್ಥಾನ ಪಡೆದು ಜನರಿಂದ ತಿರಸ್ಕೃತಗೊಂಡ ಪಕ್ಷ ರಾಜ್ಯವನ್ನು ಆಳಬೇಕೇ? ಅಥವಾ 104 ಸ್ಥಾನ ಪಡೆದ ಬಿಜೆಪಿಗೆ ಅಧಿಕಾರ ನೀಡಬೇಕೇ ಎಂದು ಶಾ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.