Publish Date: Wed, 02 Mar 2022 (10:45 IST)
Updated Date: Wed, 02 Mar 2022 (11:08 IST)
ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು ಅಮೆರಿಕಾಗೆ ಗಡಿಪಾರು ಮಾಡುವಂತೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಿಂದ ಎಡಿಜಿಪಿ ಪ್ರತಾಪ್ ರೆಡ್ಡಿ ಮೂಲಕ ಗೃಹಮಂತ್ರಿ ಕಛೇರಿಯ ಮುಖ್ಯ ಕಾರ್ಯದರ್ಶಿಗೆ ಶಿಫಾರಸ್ಸು ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.
ಸಮುದಾಯ ಒಂದರ ಅವಹೇಳನಕ್ಕೆ ಸಂಬಂಧಿಸಿದಂತೆ ಚೇತನ್ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸ್ ಇಲಾಖೆ, ಚೇತನ್ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಅಮೆರಿಕಾಗೆ ಗಡಿಪಾರು ಮಾಡುವಂತೆ ಶಿಫಾರಸ್ಸು ಮಾಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಮೂಲತಃ ಮೈಸೂರಿನವರಾದ ಚೇತನ್ ಕುಟುಂಬ ಅಮೆರಿಕಾದಲ್ಲಿ ವಾಸವಿದೆ. ಚೇತನ್ ಅಮೆರಿಕಾದಲ್ಲೇ ಹುಟ್ಟಿ ಬೆಳೆದಿದ್ದಾರೆ. ಅವರು ಅಲ್ಲಿನ ಪೌರತ್ವ ಪಡೆದಿದ್ದಾರೆ. ಹಾಗಾಗಿ ಅಮೆರಿಕಾಗೆ ಗಡಿಪಾರು ಮಾಡುವಂತೆ ಶಿಫಾರಸ್ಸಿನಲ್ಲಿ ತಿಳಿಸಲಾಗಿದೆಯಂತೆ.
ತಮ್ಮನ್ನು ಗಡಿಪಾರು ಮಾಡುವಂತೆ ಶಿಫಾರಸ್ಸು ಮಾಡಿರುವ ವಿಷಯ ತಮಗೆ ಗೊತ್ತಿಲ್ಲ ಮತ್ತು ತಮ್ಮ ವಕೀಲರ ಗಮನಕ್ಕೂ ಬಂದಿಲ್ಲ ಎಂದಿದ್ದಾರೆ ಚೇತನ್. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಹೋರಾಟ ನಿರಂತರವಾಗಿ ಇರಲಿದೆ ಎಂದು ಅವರು ಹೇಳಿದ್ದಾರೆ.