Select Your Language

Notifications

webdunia
webdunia
webdunia
webdunia

'ಕಿಲಾಡಿ' ಕನ್ನಡ ಟಿವಿ ರಿಯಾಲಿಟಿ ಶೋಗೆ No ಎಂದ ದರ್ಶನ್..!

'ಕಿಲಾಡಿ' ಕನ್ನಡ ಟಿವಿ ರಿಯಾಲಿಟಿ ಶೋಗೆ No ಎಂದ ದರ್ಶನ್..!
, ಶುಕ್ರವಾರ, 5 ಏಪ್ರಿಲ್ 2013 (13:49 IST)
PR
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್ ಹಾದಿಯಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಾಗಲಿದ್ದಾರೆ. ಶೀಘ್ರದಲ್ಲೇ ಅವರು ಟಿವಿ ರಿಯಾಲಿಟಿ ಶೋ ಒಂದರಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು. ಆದರೆ ಅದಕ್ಕೀಗ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ರಿಯಾಲಿಟಿ ಶೋವನ್ನೂ ತಾನು ಒಪ್ಪಿಕೊಂಡಿಲ್ಲ ಎಂದಿದ್ದಾರೆ!

ಕನ್ನಡದ ಜನಪ್ರಿಯ ಮಾಸ್ ಹೀರೋ ದರ್ಶನ್ ಟಿವಿಗೆ ಬರುತ್ತಾರೆ ಎಂದ ಮೇಲೆ ಕುತೂಹಲ ಇಲ್ಲದೇ ಇರುವುದೇ? ಅವರ ಕೋಟ್ಯಂತರ ಅಭಿಮಾನಿಗಳು ಈ ಬಗ್ಗೆ ಕಾತರರಾಗಿದ್ದರು.

ಹಿಂದಿಯಲ್ಲಿ ಅಕ್ಷಯ್ ಕುಮಾರ್, ಪ್ರಿಯಾಂಕಾ ಚೋಪ್ರಾ ನಡೆಸಿಕೊಟ್ಟಿದ್ದ 'ಕತರೋನ್ ಕೀ ಕಿಲಾಡಿ' ರಿಯಾಲಿಟಿ ಕಾರ್ಯಕ್ರಮ ಕನ್ನಡದಲ್ಲೂ ಬರುತ್ತಿದೆ. ಆ ಕಾರ್ಯಕ್ರಮವನ್ನು ದರ್ಶನ್ ನಡೆಸಿಕೊಡಬೇಕು ಎನ್ನುವುದು ಕಾರ್ಯಕ್ರಮದ ನಿರ್ಮಾಪಕರ ಬಯಕೆ. ಅದರಂತೆ ದರ್ಶನ್‌ರನ್ನು ಸಂಪರ್ಕಿಸಿದ್ದರು.

ಇದನ್ನು ನಿರೂಪಿಸಲು ಅಕ್ಷಯ್ ಕುಮಾರ್ ಪ್ರತಿದಿನದ ಸಂಚಿಕೆಗೆ 1 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆದಿದ್ದರು. ಮೂಲಗಳ ಪ್ರಕಾರ, ಒಂದು ಸೀಸನ್ ನಿರೂಪಿಸಲು ದರ್ಶನ್ 12 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಇಷ್ಟು ದೊಡ್ಡ ಮೊತ್ತಕ್ಕೆ ಕಾರ್ಯಕ್ರಮದ ನಿರ್ಮಾಪಕರು ರೆಡಿ ಇರಲಿಲ್ಲ. ಕಡಿಮೆ ಮೊತ್ತಕ್ಕೆ ದರ್ಶನ್ ಒಪ್ಪಲಿಲ್ಲ. ಹಾಗಾಗಿ ಒಪ್ಪಂದ ನಡೆದಿಲ್ಲ ಎಂದು ಹೇಳಲಾಗಿದೆ.

ಪುರುಸೊತ್ತಿಲ್ಲ: ದರ್ಶನ್
ನಾನು ಯಾವುದೇ ಟಿವಿ ಚಾನೆಲ್‌ಗೆ ಯಾವುದೇ ರೀತಿಯ ರಿಯಾಲಿಟಿ ಕಾರ್ಯಕ್ರಮ ಅಥವಾ ಗೇಮ್ ಶೋ ನಡೆಸುತ್ತಿಲ್ಲ. ನಾನು ಸಿನಿಮಾಗಳಲ್ಲೇ ಸಂತೋಷವಾಗಿದ್ದೇನೆ. ಇನ್ನಷ್ಟು ಸಮಯ ಇದ್ದರೆ ಸಿನಿಮಾಗಳಿಗೆ ವಿನಿಯೋಗಿಸುತ್ತೇನೆ. ಸಿನಿಮಾ ಹೊರತುಪಡಿಸಿ ಬೇರೆ ಯಾವುದಕ್ಕೂ ಸಮಯ ನನ್ನಲ್ಲಿಲ್ಲ ಎಂದು ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಬುಲ್ ಬುಲ್ ಚಿತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದೇನೆ. ಏಪ್ರಿಲ್ 11ರ ಹೊತ್ತಿಗೆ ಚಿತ್ರದ ಮೊದಲ ಪ್ರತಿ ಹೊರಗೆ ಬರುತ್ತದೆ. ನಂತರ ಸೆನ್ಸಾರ್ ಆಗಿ ಇದೇ ತಿಂಗಳು ಬಿಡುಗಡೆ ಆಗಬೇಕಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಚುನಾವಣೆ ಬಳಿಕ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ರಿಯಾಲಿಟಿ ಶೋಗೆ ದರ್ಶನ್ ನಕಾರ ಸೂಚಿಸಿರುವುದರಿಂದ ಕಾರ್ಯಕ್ರಮ ನಿರ್ಮಾಪಕರು ಬೇರೆ ನಾಯಕರ ಮೊರೆ ಹೋಗುವ ನಿರೀಕ್ಷೆಗಳಿವೆ.

Share this Story:

Follow Webdunia kannada