ಕನ್ನಡ 'ಬಿಗ್ ಬಾಸ್'ಗೆ ಸುದೀಪ್ ಶಿಫಾರಸು ಮಾಡಿದ್ದು ಸಲ್ಮಾನ್!
'
ಈಗ' ಚಿತ್ರದ ಹಿಂದಿ ಆವೃತ್ತಿ 'ಮಖಿ'ಯ ಕೆಲವು ಭಾಗಗಳ ಚಿತ್ರೀಕರಣ ಸಂದರ್ಭ ಸಲ್ಮಾನ್ ಖಾನ್ ಸೆಟ್ಗೆ ಬಂದಿದ್ದರು. ನಂತರ ಚಿತ್ರವನ್ನೂ ನೋಡಿದ್ದ ಸಲ್ಮಾನ್ ತುಂಬಾನೇ ಪ್ರಭಾವಿತರಾಗಿದ್ದರು. ಅದೇ ಕಾರಣದಿಂದ ಕನ್ನಡದ ಬಿಗ್ಬಾಸ್ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ನಿರೂಪಿಸಲಿ ಎಂದು ಶಿಫಾರಸು ಮಾಡಿದರಂತೆ!ಹೀಗೆಂದು ಮುಂಬೈಯಲ್ಲೆಲ್ಲ ಗುಲ್ಲು ಹರಡಿದೆ. ಸಲ್ಮಾನ್ ಶಿಫಾರಸು ಮಾಡಿದ ಕಾರಣ ಎರಡನೇ ಆಯ್ಕೆ ಬಗ್ಗೆ ಕಾರ್ಯಕ್ರಮದ ನಿರ್ಮಾಪಕರು ಯೋಚಿಸಲಿಲ್ಲ. ನೇರವಾಗಿ ಸುದೀಪ್ ಸಂಪರ್ಕಿಸಿ, ಒಪ್ಪಂದ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.ಅಂದ ಹಾಗೆ, 'ಕನ್ನಡದ ಬಿಗ್ ಬಾಸ್' ರಿಯಾಲಿಟಿ ಶೋ ಮಾರ್ಚ್ 23ರಿಂದಲೇ ಆರಂಭ. ಅಂದಿನಿಂದ ಮುಂಬೈಯ ಲೋನಾವಾಲದಲ್ಲಿನ ಸೆಟ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಆದರೆ ಪ್ರಸಾರದ ದಿನಾಂಕ ಮತ್ತು ಸಮಯ ಇದುವರೆಗೆ ಬಹಿರಂಗವಾಗಿಲ್ಲ. ಬೃಹತ್ ಮನೆಯಲ್ಲಿ ಬಂಧಿಯಾಗಲಿರುವ ಸೆಲೆಬ್ರಿಟಿಗಳ ಹೆಸರೂ ಗೊತ್ತಾಗಿಲ್ಲ.ಒಟ್ಟು 23 ಮಂದಿ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಇರುತ್ತಾರೆ. ಅಷ್ಟೂ ಮಂದಿಗೆ ಇರುವುದು ಕೇವಲ ಮೂರು ಬೆಡ್ರೂಮ್ ಮತ್ತು ಮೂರು ಟಾಯ್ಲೆಟ್-ಬಾತ್ರೂಮ್. ಪತ್ರಿಕೆ, ಟಿವಿ, ಮೊಬೈಲ್, ಪೆನ್ನು-ಪೇಪರ್ ಸೇರಿದಂತೆ ಆಧುನಿಕ ಜಗತ್ತಿನ ಯಾವುದೇ ವಸ್ತುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನೀಡಲಾಗುವುದಿಲ್ಲ. ಅಷ್ಟೂ ಮಂದಿ ಮನೆಯೊಳಗೆ ಹೇಗಿರುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ. ಪ್ರತಿವಾರ ಇಬ್ಬರು ಸ್ಪರ್ಧಿಗಳು ಹೊರಗೆ ಹೋಗುತ್ತಾರೆ. ಅವರನ್ನು ಹೊರಗೆ ದಬ್ಬುವಲ್ಲಿ ಪ್ರೇಕ್ಷಕರಿಗೂ ಓಟಿಂಗ್ ಅವಕಾಶವಿದೆ.ಸಲ್ಮಾನ್ ಖಾನ್ರಿಂದ ಸ್ಫೂರ್ತಿ ಪಡೆದಿರುವ ಸುದೀಪ್ ಈಗ ಕಾರ್ಯಕ್ರಮದ ಸಿದ್ಧತೆ ನಡೆಸುತ್ತಿದ್ದಾರೆ. ಸಲ್ಮಾನ್ ನಿರೂಪಿಸಿದ ಅರ್ಧದಷ್ಟಾದರೂ ಮಾಡಿದರೆ ಅದೇ ಗ್ರೇಟ್ ಎಂದು ಸುದೀಪ್ ಹೇಳಿಕೊಂಡಿದ್ದಾರೆ.ಅಂತೂ ಇನ್ನು ಕೆಲವೇ ದಿನಗಳಲ್ಲಿ ಟಿವಿ ಮುಂದೆ ಸೆಲೆಬ್ರಿಟಿಗಳ ಗೌಜಿ-ಗಲಾಟೆ ನೋಡಬಹುದು. ಅವರ ನಡುವಿನ ಗಲಾಟೆ, ಸಮಸ್ಯೆಗಳನ್ನು ಸುದೀಪ್ ಹೇಗೆ ಬಗೆಹರಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ. ಅತ್ತ ಪುನೀತ್ ರಾಜ್ಕುಮಾರ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವೂ ಆರಂಭವಾಗುತ್ತಿದೆ ಇವೆರಡರಲ್ಲಿ ಪ್ರೇಕ್ಷಕರಿಗೆ ಯಾವುದು ಹೆಚ್ಚು ಮೆಚ್ಚುಗೆಯಾಗಲಿದೆ ಎಂಬುದರ ಮೇಲೆ ಕಾರ್ಯಕ್ರಮದ ಯಶಸ್ಸು ಅಡಗಿದೆ.