ಮೂರ್ಖರ ಪೆಟ್ಟಿಗೆ ಅಂತ ಜರೆಸಿಕೊಳ್ಳುತ್ತಿರುವ ಟಿವಿ ಬೆಳೆಯುತ್ತಿರುವ ಪರಿ ಅಚ್ಚರಿ ಹುಟ್ಟಿಸುವಂತದ್ದು. ಆದರೂ ಕನ್ನಡದಲ್ಲಿ ಇದುವರೆಗೆ ಕೋಟಿ ಸುರಿಯಲು ಯಾರೂ ಮುಂದಾಗಿರಲಿಲ್ಲ. ಈಗ ಅಂತಹ ಸಾಹಸಕ್ಕೆ ಕೈ ಹಾಕಿರುವುದು ಸುವರ್ಣ ಟಿವಿ. ಅಚ್ಚರಿಯ ಸಂಗತಿಯೆಂದರೆ, ಈ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಡೆಸಿಕೊಡಲಿರುವುದು!
ಪುನೀತ್ ಕಿರುತೆರೆಯತ್ತ ಹೋಗುತ್ತಿದ್ದಾರೆ ಅನ್ನೋದೇ ಬ್ರೇಕಿಂಗ್ ನ್ಯೂಸ್. ಅದರಲ್ಲೂ ಇದು ಸ್ಟಾರ್ ಪ್ಲಸ್ನ 'ಕೌನ್ ಬನೇಗಾ ಕರೋಡ್ಪತಿ'ಯ ಕನ್ನಡ ಆವೃತ್ತಿಯೆಂದರೆ ಕೇಳಬೇಕೇ? ಅಲ್ಲಿ ಅಮಿತಾಬ್ ಬಚ್ಚನ್ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಮೋಡಿ ಮಾಡುವಂತೆ ಕನ್ನಡದಲ್ಲಿ ಪುನೀತ್ ಚಾಕಚಕ್ಯತೆ ಮೆರೆಯಲಿದ್ದಾರೆ.
ಇದೇ ಕಾರಣದಿಂದ, ಇತ್ತೀಚೆಗೆ ಸೀನಿಯರ್ ಬಚ್ಚನ್ರನ್ನು ಪುನೀತ್ ಭೇಟಿ ಮಾಡಿದ್ದಾರೆ. ಕರೋಡ್ಪತಿ ಚಿತ್ರೀಕರಣವನ್ನೂ ವೀಕ್ಷಿಸಿದ್ದಾರೆ. ಇದಕ್ಕೆ ಸಾಥ್ ನೀಡಿರುವುದು ಸುವರ್ಣ ವಾಹಿನಿಯ ಪ್ರಾದೇಶಿಕ ಮುಖ್ಯಸ್ಥ ಅನೂಪ್ ಚಂದ್ರಶೇಖರ್ ಮತ್ತು ಪ್ರಕೃತಿ ಬಣವಾಸಿ. ಈ ಸಂದರ್ಭದಲ್ಲಿ ಅಮಿತಾಬ್ರಿಂದ ಹಲವು ಸಂಗತಿಗಳನ್ನು ಕೇಳಿ ತಿಳಿದುಕೊಂಡ ಪುನೀತ್, ಒಂದಷ್ಟು ಸ್ಫೂರ್ತಿಯನ್ನೂ ಪಡೆದಿದ್ದಾರೆ. ಅದೇ ಸ್ಫೂರ್ತಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅಂದ ಹಾಗೆ, ಕನ್ನಡದ ಕರೋಡ್ಪತಿ ಕಾರ್ಯಕ್ರಮ ಸದ್ಯಕ್ಕೇನೂ ಆರಂಭವಾಗುತ್ತಿಲ್ಲ. ಈಗಷ್ಟೇ ಸಿದ್ಧತೆ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಪ್ರತಿ ಮನೆಯಲ್ಲೂ ಕೋಟಿ ಕೋಟಿ ಲೆಕ್ಕ ನೋಡಬಹುದು. ಅದೃಷ್ಟವಿದ್ದರೆ, ಅದನ್ನು ಮನೆಗೂ ತರಬಹುದು. ಯಾವುದಕ್ಕೂ ಕಾದು ನೋಡಿ.