Publish Date: Mon, 18 Sep 2023 (11:58 IST)
Updated Date: Mon, 18 Sep 2023 (12:01 IST)
ಇಡೀ ಭಾರತ ದೇಶವೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಅಂದರೆ ಗಣೇಶ ಚತುರ್ಥಿ. ಹಬ್ಬಗಳು ಬಂದರೆ ಸಾಕು ಸಿಹಿ ತಿನಿಸುಗಳನ್ನು ಮಾಡಬೇಕು. ಅದರಲ್ಲೂ ಗಣೇಶ ಹಬ್ಬವೆಂದರೆ ಮುಂಚಿತವಾಗಿ ಗಣಪನಿಗೆ ಇಷ್ಟವಾಗುವ ತಿಂಡಿ-ತಿನಿಸುಗಳನ್ನು ಮಾಡಿ ಸಿದ್ಧ ಮಾಡಿಕೊಳ್ಳಬೇಕು.
ಬೇಕಾಗುವ ಸಾಮಾಗ್ರಿಗಳು
1. ಅಕ್ಕಿ ಹಿಟ್ಟು – ಅರ್ಧ ಕೆಜಿ
2. ಬೆಲ್ಲ – 1 ಅಚ್ಚು
3. ಹುರಿಗಡಲೆ – 1/4 ಕೆಜಿ
4. ಕೊಬ್ಬರಿ ತುರಿ – 1 ಬಟ್ಟಲು
5. ಏಲಕ್ಕಿ – 2-3
6. ತುಪ್ಪ – 2 ಚಮಚ
7. ಬಾಳೆ ಎಲೆ
ಮಾಡುವ ವಿಧಾನ
* ಬೆಲ್ಲವನ್ನು ತುರಿದುಕೊಳ್ಳಿ. ಹಾಗೆಯೇ ಹುರಿಗಡಲೆಯನ್ನು ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ.
* ಈಗ ಒಂದು ಮಿಕ್ಸಿಂಗ್ ಬೌಲ್ಗೆ ಪುಡಿ ಮಾಡಿದ ಹುರಿಗಡಲೆ, ತುರಿದ ಬೆಲ್ಲ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಊರ್ಣ ತಯಾರಿಸಿಕೊಳ್ಳಿ. (ಸಿಹಿ ಜಾಸ್ತಿ ಬೇಕಾದ್ರೆ ಬೆಲ್ಲ ಸೇರಿಸಿ, ಬೇಕಿದ್ದರೆ ಗೋಡಂಬಿ, ದ್ರಾಕ್ಷಿ. ಬಾದಾಮಿಯನ್ನು ಸಣ್ಣಗೆ ಕಟ್ ಮಾಡಿ ಸೇರಿಸಬಹುದು. ಗಸಗಸೆ ಕೂಡ ಸೇರಿಸಬಹುದು)
* ಒಂದು ಅಗಲವಾದ ತಳಹತ್ತದ ಅಥವಾ ನಾನ್ ಸ್ಟಿಕ್ ಪಾತ್ರೆಗೆ ಒಂದು ಲೋಟ ನೀರು ಹಾಕಿ ಕುದಿಸಿ.
* ನೀರು ಕುದಿಯುತ್ತಿರುವಾಗ ನಿಧಾನವಾಗಿ ಅಕ್ಕಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿ ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಿ.
* ಕೈ ಬಿಡದೇ ಹಿಟ್ಟಿನ ಕೋಲನ್ನು ಬಳಸಿ ತಿರುಗಿಸುತ್ತೀರಿ. ಈಗ 2 ಚಮಚ ತುಪ್ಪ ಸೇರಿಸಿ.
* ಹಿಟ್ಟು ತೀರ ತೆಳ್ಳಗೂ ಅಲ್ಲದೆ, ತೀರ ಗಟ್ಟಿಯಾಗಿಯೂ ಇರಬಾರದು.
* ಈಗ ಲಾಡು ಸೈಜ್ನ ಅಕ್ಕಿ ಹಿಟ್ಟಿನ ಮುದ್ದೆ ತೆಗೆದುಕೊಂಡು ಕೈಯಲ್ಲೇ ಅಗಲ ಮಾಡಿ ಒಳಗೆ ಊರ್ಣ ಇಟ್ಟು ಕಡುಬು ಶೇಪ್ನಲ್ಲಿ ಮಡಿಚಿ.
* ಹಿಟ್ಟು ಬಿಸಿ ಇರುವಾಗಲೇ ಮಾಡಬೇಕು, ಆಮೇಲೆ ಮಾಡಿದರೆ ಹಿಟ್ಟು ಒಡೆಯುತ್ತದೆ. ಬಿಸಿ ಆರಿದ್ರೆ ಬೇಕಾದಲ್ಲಿ ಮತ್ತೆ ಒಲೆಯ ಮೇಲಿಟ್ಟು ಬಿಸಿ ಮಾಡಿಕೊಳ್ಳಬಹುದು.
* ಹೀಗೆ ಮಾಡಿಟ್ಟುಕೊಂಡ ಕಡುಬುಗಳನ್ನು ಬಾಳೆಎಲೆಯಲ್ಲಿ ಅಥವಾ ಅರಿಶಿನ ಎಲೆಯ ಒಳಗಿಟ್ಟು ಇಡ್ಲಿ ಕುಕ್ಕರ್ ನಲ್ಲಿಟ್ಟು 10-12 ನಿಮಿಷ ಬೇಯಿಸಿ.