ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಇಂದು ಬೆಳಿಗ್ಗೆ ರಿಯೊ ಡಿ ಜನೈರೊದಿಂದ ಆಗಮಿಸುತ್ತಿದ್ದಂತೆ ಹರ್ಯಾಣ ಸರ್ಕಾರಿ ಗೌರವದೊಂದಿಗೆ ಭವ್ಯ ಸ್ವಾಗತ ನೀಡಿದೆ. ಇಂದು ಮುಂಜಾನೆ ಸಾಕ್ಷಿ ಚಂದೀಗಢದಲ್ಲಿ ಇಳಿಯುತ್ತಿದ್ದಂತೆ ಬಿಜೆಪಿಯ ಸಚಿವರು ಅವರನ್ನು ಸ್ವಾಗತಿಸಿದರು. ಹರ್ಯಾಣ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅನಿಲ್ ವಿಜ್ ರಿಯೊದಿಂದ ವಾಪಸ್ ಫ್ಲೈಟ್ನಲ್ಲಿ ಸಾಕ್ಷಿಯ ಜತೆಗೂಡಿದ್ದರು.
ಸಾಕ್ಷಿ ಬಳಿಕ ಬಹಾದುರ್ಗಢಕ್ಕೆ ಪ್ರಯಾಣಿಸಿ ಅಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸ್ಟಾರ್ ಅಥ್ಲೀಟ್ಗೆ ಸ್ವಾಗತ ನೀಡಿ ಸನ್ಮಾನ ಸಮಾರಂಭದಲ್ಲಿ 2.5 ಕೋಟಿ ರೂ. ಚೆಕ್ಕನ್ನು ಮುಖ್ಯಮಂತ್ರಿ ಸಾಕ್ಷಿಗೆ ಹಸ್ತಾಂತರಿಸಿದರು.
ಸಾಕ್ಷಿಯನ್ನು ಬೇಟಿ ಪಡಾವೊ, ಬೇಟಿ ಬಚಾವೊ ಕಾರ್ಯಕ್ರಮಕ್ಕೆ ಹರ್ಯಾಣದ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಯಿತು. ನಮ್ಮ ಇಬ್ಬರು ಹೆಣ್ಣುಮಕ್ಕಳು ಸಾಕ್ಷಿ ಮಲಿಕ್ ಮತ್ತು ಪಿವಿ ಸಿಂಧು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆಂದು ಖಟ್ಟರ್ ಹೇಳಿದರು.
ಸಾಕ್ಷಿ ಸಂಕ್ಷಿಪ್ತ ಭಾಷಣದಲ್ಲಿ ತನಗೆ ನೀಡಿದ ಬೆಂಬಲ ಮತ್ತು ಶುಭ ಹಾರೈಕೆಗಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವುದಾಗಿ ತಿಳಿಸಿದರು.