Publish Date: Wed, 23 Aug 2017 (09:15 IST)
Updated Date: Wed, 23 Aug 2017 (09:17 IST)
ನವದೆಹಲಿ: ದೇಶದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ ವಿಜೇತರ ಹೆಸರು ಪ್ರಕಟಣೆಯಾಗಿದ್ದು, ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ ಹಲವು ಕ್ರೀಡಾ ಪ್ರತಿಭೆಗಳಿಗೆ ಪ್ರಶಸ್ತಿ ಲಭಿಸಿದೆ.
ಮಹಿಳಾ ವಿಶ್ವಕಪ್ ನಲ್ಲಿ ಹೊಸ ಹವಾ ಸೃಷ್ಟಿಸಿದ ಹರ್ಮನ್ ಪ್ರೀತ್ ಕೌರ್ ಗೆ ಅರ್ಜುನ ಪ್ರಶಸ್ತಿ ಲಭಿಸಿದೆ. ಅವರ ಜತೆಗೆ ಕ್ರಿಕೆಟಿಗ ಚೇತೇಶ್ವರ ಪೂಜಾರ, ಜಸ್ಬೀರ್ ಸಿಂಗ್, ಟಿ. ಮರಿಯಪ್ಪನ್ ಅರ್ಜುನ ಪ್ರಶಸ್ತಿಗೆ ಭಾಜನರಾದ ಪ್ರಮುಖರು.
ಆದರೆ ಕನ್ನಡಿಗ ರೋಹನ್ ಬೋಪಣ್ಣಗೆ ನಿರಾಸೆಯಾಗಿದೆ. ಈ ವರ್ಷ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದು ಪ್ರಶಸ್ತಿ ಪಡೆಯುವ ಅರ್ಹತೆ ಇದ್ದರೂ, ಟೆನಿಸ್ ಅಕಾಡಮಿ ಗಡುವು ಮುಗಿದ ಮೇಲೆ ಅರ್ಜಿ ಸಲ್ಲಿಸಿದ ಕಾರಣ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಟೆನಿಸ್ ಅಕಾಡೆಮಿಯ ಬೇಜವಬ್ದಾರಿ ವರ್ತನೆಯಿಂದ ಕನ್ನಡಿಗನಿಗೆ ಸಿಗಬೇಕಾದ ಮಾನ್ಯತೆ ದೊರೆಯದೇ ಹೋಯ್ತು.
ಧ್ಯಾನ್ ಚಂದ್ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದ್ದು, ಭೂಪಿಂದರ್ ಸಿಂಗ್, ಸೈಯದ್ ಶಾಹಿದ್ ಹಕೀಂ ಮತ್ತು ಸುಮರಾಯ್ ಟೆಟೆ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಇಂಗ್ಲೆಂಡ್ ನಲ್ಲಿ ಅತ್ಯಾಚಾರ ಆರೋಪಕ್ಕೊಳಗಾಗಿದ್ದ ಹಾಕಿ ಆಟಗಾರ ಸರ್ದಾರ್ ಸಿಂಗ್ ಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿದೆ.