Publish Date: Thu, 25 Nov 2021 (17:33 IST)
Updated Date: Thu, 25 Nov 2021 (19:36 IST)
ಕಾನ್ಪುರ : ಆಸ್ಪತ್ರೆ ಬೆಡ್ನಿಂದ ಎದ್ದು ಈಗ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿ ಮಿಂಚಲು ಶ್ರೇಯಸ್ ಅಯ್ಯರ್ ದಿಟ್ಟ ಹೆಜ್ಜೆಯನ್ನೇ ಇಟ್ಟಿದ್ದಾರೆ.
ಕಳೆದ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಒಡಿಐ ಸರಣಿ ವೇಳೆ ಫೀಲ್ಡಿಂಗ್ ಸಮಯ ಭುಜದ ಮೂಳೆ ಮುರಿದುಕೊಂಡ ಶ್ರೇಯಸ್ ಅಯ್ಯರ್ ಅವರ ವೃತ್ತಿಬದುಕು ಅಲ್ಲೋಲ ಕಲ್ಲೋವೇ ಆಗಿತ್ತು.
ಇದೇ ಗಾಯದ ಸಮಸ್ಯೆ ಕಾರಣ ಅವರು ಐಪಿಎಲ್ 2021 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನೂ ಕಳೆದುಕೊಳ್ಳುವಂತ್ತಾಗಿ, ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲೂ ಅವಕಾಶ ಪಡೆಯದೇ ಹೋದರು. ಐಪಿಎಲ್ 2021 ಟೂರ್ನಿಯ 2ನೇ ಚರಣದ ಮೂಲಕ ವೃತ್ತಿಪರ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿರುವ ಶ್ರೇಯಸ್ ದಿಟ್ಟ ನಡೆಯಲ್ಲಿ ಸಾಗಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದ 26 ವರ್ಷದ ಬಲಗೈ ಬ್ಯಾಟ್ಸ್ಮನ್ ಪದಾರ್ಪಣೆಯ ಪಂದ್ಯದಲ್ಲೇ ಶತಕದತ್ತ ದಾಪುಗಾಲಿಟ್ಟಿದ್ದಾರೆ. ಭಾರತ ಟೆಸ್ಟ್ ತಂಡದ ಪರ ಆಡಿದ 303ನೇ ಆಟಗಾರ ಎನಿಸಿಕೊಂಡ ಶ್ರೇಯಸ್, ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಗುರುವಾರ 136 ಎಸೆತಗಳಲ್ಲಿ 7 ಫೋರ್ ಮತ್ತು 2 ಸಿಕ್ಸರ್ಗಳೊಂದಿಗೆ ಅಜೇಯ 75 ರನ್ ಬಾರಿಸಿ ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಮೇಲೆತ್ತಿ ಬೃಹತ್ ಮೊತ್ತದ ಕಡೆಗೆ ಕೊಂಡೊಯ್ದಿದ್ದಾರೆ.