ಓಲಂಪಿಕ್ಸ್ನಲ್ಲಿ ಗೆಲ್ಲಬೇಕು ಎಂಬ ಆಸೆಯೊಂದಿಗೆ ಹಲವರು ಕ್ರೀಡಾಪಟುಗಳಾಗುತ್ತಾರೆ. ಆದರೆ ಈ ಬಾರಿಯ ಓಲಂಪಿಕ್ಸ್ನಲ್ಲಿ ಭಾರತಕ್ಕೆ ಚೊಚ್ಚಲ ಪಕ ತಂದುಕೊಟ್ಟಿರುವ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಕ್ರೀಡಾಪಟುವಾಗಿದ್ದು ಏಕೆ ಗೊತ್ತಾ? ವಿಮಾನವನ್ನೇರಬೇಕೆಂಬ ಆಸೆಯಿಂದ ಅಂತೆ.
ಓಲಂಪಿಕ್ಸ್ ಅಂದ್ರೆ ಏನು ಅಂತಾ ಗೊತ್ತಿರಲಿಲ್ಲ. ಓಲಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದರೆ ವಿಮಾನದಲ್ಲಿ ಹೋಗಲು ಅವಕಾಶ ಸಿಗುತ್ತದೆ ಎಂಬುದನ್ನು ಕೇಳಿ ನಾನು ಆ ಕನಸನ್ನು ಬೆಳೆಸಿಕೊಂಡೆ. ವಿಮಾನದಲ್ಲಿ ಹಾರಾಡುತ್ತ ಜಗವನ್ನು ಸುತ್ತೋ ಆಸೆಯಿಂದ ನಾನು ಕುಸ್ತಿಪಟುವಾದೆ ಎನ್ನುತ್ತಾರೆ ಸಾಕ್ಷಿ.
ಓಲಂಪಿಕ್ಸ್, ಕಾಮನವೆಲ್ತ್, ಏಶಿಯನ್ ಗೇಮ್ಸ್ ಏನೆಂದು ತಿಳಿಯದೇ ಆಟವಾಡಲು ಪ್ರಾರಂಭಿಸಿದ ಹುಡುಗಿಯೊಬ್ಬಳು ಇಂದು ದೇಶದಲ್ಲಿಯೇ ಹೆಚ್ಚು ಚರ್ಚೆಗೊಳಗಾಗುತ್ತಿರುವ ವ್ಯಕ್ತಿಯಾಗಿ ಬೆಳೆದಿದ್ದು ಇತಿಹಾಸ.
ಗುರುವಾರ ಮುಂಜಾನೆ ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಸಾಕ್ಷಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಸೆಪ್ಟೆಂಬರ್ 3, 1992ರಲ್ಲಿ ಜನಿಸಿದ್ದ ಸಾಕ್ಷಿ ತಂದೆ ಸುದೇಶ್ ಮಲ್ಲಿಕ್ ಮತ್ತು ತಾಯಿ ಸುಖಬಿರ್ ಮಲ್ಲಿಕ್. ಹೆಣ್ಣು ಭ್ರೂಣ ಹತ್ಯೆ ಕುಖ್ಯಾತಿಗೆ ಒಳಗಾಗಿರುವ ರಾಜ್ಯ ಹರಿಯಾಣಾದಲ್ಲಿ ಜನಿಸಿದ ಸಾಕ್ಷಿ ತಾವು ಈ ಮಟ್ಟಕ್ಕೆ ತಲುಪಲು ತಂದೆ - ತಾಯಿ ಪ್ರೋತ್ಸಾವವೇ ಕಾರಣ ಎನ್ನುತ್ತಾರೆ.