Publish Date: Tue, 19 Jul 2016 (21:13 IST)
Updated Date: Tue, 19 Jul 2016 (21:16 IST)
ಅಹಮದಾಬಾದ್-ಇಂದೋರ್ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಧರ್ ಎಂಬ ಸ್ಥಳದಿಂದ ಸುಮಾರು 47 ಕಿ. ಮೀ ಅಂತರದಲ್ಲಿ ಮೋಹನ್ ಖೇಡಾ ತೀರ್ಥ ಕ್ಷೇತ್ರವಿದ್ದು, ಇದು ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಎಂದು ಹೇಳಲಾಗುತ್ತದೆ. 1940ರಲ್ಲಿ ಶ್ರೀ ರಾಜೇಂದ್ರ ಸುರೀಶ್ವರಜಿ ಈ ಜೈನ ಕ್ಷೇತ್ರವನ್ನು ಸ್ಥಾಪಿಸಿದರು.
ಈ ಜೈನ ತೀರ್ಥ ಯಾತ್ರಾ ಸ್ಥಳದಲ್ಲಿ 16 ಅಡಿ ಎತ್ತರದ ಪದ್ಮಾಸನದಲ್ಲಿ ಕುಳಿತಿರುವ ಭಗವಾನ್ ಆದೀಶ್ವರನಾಥ ತೀರ್ಥಂಕರರ ಸೌಮ್ಯವಾದ ಬೃಹತ್ ಮೂರ್ತಿ ಇದೆ. ಪಕ್ಕದಲ್ಲೇ ರಾಜೇಂದ್ರ ಸುರೀಶ್ವರಜಿ ಸಮಾಧಿ ಸ್ಥಳವೂ ಇದೆ. ಈಗ ಯತೀಂದ್ರ ಸುರೀಶ್ವರ ಮತ್ತು ವಿದ್ಯಾಚಂದ್ರ ಸುರೀಶ್ವರರು ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಾರ್ತಿಕ ಮಾಸ ಶುಕ್ಲ ಪಕ್ಷ ಪೂರ್ಣಿಮೆಯ ದಿನದಂದು ಇಲ್ಲಿ ವರ್ಷದ ಜಾತ್ರೆ ಜರುಗುತ್ತದೆ.
ಪುಷ್ಯ ಮಾಸ ಶುಕ್ಲ ಪಕ್ಷದಂದು ತೀರ್ಥ ಕ್ಷೇತ್ರದಲ್ಲಿ ಉತ್ಸವ ನಡೆಯುತ್ತದೆ. ಈ ಬಾರಿಯ ಉತ್ಸವ ಜನವರಿ 15ರಂದು ನಡೆಯಲಿದೆ.
1940ರಲ್ಲಿ ರಾಜಗಢದ ಪಶ್ಚಿಮ ದಿಕ್ಕಿನಲ್ಲಿ ವೃಷಭದೇವ ತೀರ್ಥಂಕರರ ಅವತಾರ ಎಂದು ಹೇಳುವ ಶತ್ರುಂಜಯ ಮುನಿಯ ಜಿನಾಲಯವನ್ನು ಜೈನ ಮುನಿ ವಿಜಯ ರಾಜೇಂದ್ರ ಸುರೀಶ್ವರ ಅವರು ಸ್ಥಾಪಿಸಿ, ಮಾಳ್ವಾ ಪ್ರಾಂತ್ಯದಲ್ಲಿ ತಪಸ್ಸು ಕೈಗೊಂಡು ಪವಿತ್ರ ಯಾತ್ರಾ ಸ್ಥಳವನ್ನಾಗಿ ಪರಿವರ್ತಿಸಿದ್ದಾರೆ.
ಒಂದು ದಿನ ಮುನಿಗಳು ಈ ಸ್ಥಳವನ್ನು ದಾಟಿ ಹೋಗುತ್ತಿದ್ದರಂತೆ. ಅಚಾನಕ್ ಅವರ ಕಾಲುಗಳು ಇಲ್ಲಿಂದ ಮೇಲೆತ್ತಲಾಗದೆ ಗಟ್ಟಿಯಾಗಿ ನಿಂತುಕೊಂಡವು. ಧ್ಯಾನ ಯೋಗದ ಮೂಲಕ ಸ್ಥಳವನ್ನು ಪರೀಕ್ಷಿಸಿ, ಇದು ಪವಿತ್ರ ಯಾತ್ರಾ ಸ್ಥಳದ ಲಕ್ಷಣ ಎಂದು ಮನದಟ್ಟು ಮಾಡಿಕೊಂಡು ಮುಂದೆ ಸಾಗಿದರಂತೆ. ರಾಜಗಢ ನಗರಕ್ಕೆ ಬಂದ ನಂತರ ಲುನಾಜೀ ಪೋರವಾಲ್ ಎಂಬುವವರಿಗೆ ಕುಂಕುಮದಿಂದ ಸ್ವಸ್ತಿಕ ಬರೆದಿರುವ ಸ್ಥಳವನ್ನು ಗುರುತಿಸಿ ಬಾ ಎಂದು ಹೇಳಿದ್ದು ಅಲ್ಲದೆ, ಅಲ್ಲಿ ದೇವಸ್ಥಾನ ನಿರ್ಮಿಸುವುದಕ್ಕೆ ಆಜ್ಞಾಪಿಸಿದರು. ಮುನಿಗಳ ಮಾತಿನಂತೆ ಲುನಾಜೀ ದೇವಸ್ಥಾನ ನಿರ್ಮಿಸಿದರು ಎಂಬ ಪ್ರತೀತಿ ಇದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.