Select Your Language

Notifications

webdunia
webdunia
webdunia
webdunia

ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ

ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ
WDWD
ಪಾರ್ವತಿ ಪುತ್ರ ಗಣೇಶ, ಈ ಲೋಕದಲ್ಲಿ ಅತ್ಯಂತ ಹೆಚ್ಚು ಆರಾಧಿಸಲ್ಪಡುತ್ತಿರುವ ದೇವರು. ಅವನನ್ನು ವಿವಿಧ ರೂಪಗಳಲ್ಲಿ ವಿವಿಧ ರೀತಿಗಳಲ್ಲಿ ಆರಾಧಿಸುತ್ತಾರೆ ಭಕ್ತಜನ. ಮುಂಬಯಿಯ ಹೃದಯಭಾಗದಲ್ಲಿ ನೆಲೆಯಾಗಿರುವ ಸಿದ್ಧಿವಿನಾಯಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವೀ ದೇವರುಗಳಲ್ಲೊಬ್ಬನಾಗಿ ರಾರಾಜಿಸುತ್ತಿದ್ದಾನೆ.

ಈ ಕ್ಷೇತ್ರದಲ್ಲಿ ಏಕ ಶಿಲೆಯಿಂದ ಕಡೆಯಲಾಗಿರುವ ಸಿದ್ಧಿವಿನಾಯಕನ ಮೂರ್ತಿ 2'6'' (750 ಎಂಎಂ) ಎತ್ತರ ಹಾಗೂ 2 ' (600ಎಂಎಂ) ಅಗಲವಿದೆ. ಬಲಮುರಿ ಸೊಂಡಿಲು ಹೊಂದಿರುವುದರಿಂದ ಹೆಚ್ಚು ಕಾರಣಿಕವುಳ್ಳದ್ದು. ಆದರೆ ಸಿದ್ಧಿವಿನಾಯಕನ ಮೂರ್ತಿ ಅಪರೂಪದ ವಿನ್ಯಾಸ ಹೊಂದಿದೆ. ಮೇಲಿನ ಬಲ ಮತ್ತು ಎಡ ಕೈಗಳು ಅನುಕ್ರಮವಾಗಿ ಪದ್ಮ ಮತ್ತು ಅಂಕುಶವನ್ನು ಹೊಂದಿದೆ. ಕೆಳಗಿನ ಬಲ, ಎಡ ಕೈಗಳು ಅನುಕ್ರಮವಾಗಿ ಜಪಮಾಲೆ ಮತ್ತು ಮೋದಕ ತುಂಬಿದ ಪುಟ್ಟ ಬೋಗುಣಿಯನ್ನು ಹೊಂದಿವೆ.

webdunia
WDWD
ಯಜ್ಞೋಪವೀತ (ಜನಿವಾರ) ರೂಪದಲ್ಲಿ ಹಾವು ಸುತ್ತಿಕೊಂಡಿದೆ. ವಿಗ್ರಹದ ಹಣೆಯಲ್ಲೊಂದು ಕಣ್ಣು ಇದ್ದು, ಇದು ತ್ರಿನೇತ್ರ ಶಿವನ ಹಣೆಗಣ್ಣಿನಂತೆಯೇ ಗೋಚರಿಸುತ್ತದೆ. ಗಣೇಶ ವಿಗ್ರಹದ ಎರಡೂ ಪಾರ್ಶ್ವಗಳಲ್ಲಿ ಋದ್ಧಿ ಮತ್ತು ಸಿದ್ಧಿಯರ ಪ್ರತಿಮೆಗಳಿದ್ದು, ಗಣೇಶನ ಹಿಂದಿನಿಂದ ಇಣುಕುತ್ತಿರುವ ಮಾದರಿಯಲ್ಲಿವೆ. ಋದ್ಧಿ-ಸಿದ್ಧಿಯರು ಇರುವುದರಿಂದಾಗಿಯೇ ಈ ಕ್ಷೇತ್ರವು ಸಿದ್ಧಿವಿನಾಯಕ ಕ್ಷೇತ್ರವಾಗಿ ಮೆರೆಯುತ್ತಿದೆ.

ಬಲಮುರಿ ಗಣೇಶನ ವಿಗ್ರಹಗಳು ಅತ್ಯಂತ ಅಪರೂಪ. ತೀರಾ ಇತ್ತೀಚೆಗಷ್ಟೇ ಸಿದ್ಧಿವಿನಾಯಕ ಮಂದಿರದ ಪುನರ್‌ಪ್ರತಿಷ್ಠಾ ಕಾರ್ಯಗಳು ಪೂರ್ಣಗೊಂಡಿದ್ದು, ಈ ಮಂದಿರವನ್ನು 1801ರ ನವೆಂಬರ್ 19, ಗುರುವಾರ ಪ್ರತಿಷ್ಠಾಪಿಸಲಾಗಿತ್ತು.

ಹಿಂದೂ ಕ್ಯಾಲೆಂಡರ್ ಪ್ರಕಾರ ಅದು ಕಾರ್ತಿಕ ಶುದ್ಧ ಚತುರ್ದಶಿ, ಶಕೆ 1723, ದುರ್ಮುಖ ನಾಮ ಸಂವತ್ಸರ. ಇದರ ಗರ್ಭಗುಡಿ ಪ್ರದೇಶ 3.6x3.6 ಚದರ ಮೀಟರ್. 450 ಎಂಎಂ ದಪ್ಪದ ಇಟ್ಟಿಗೆ ಗೋಡೆ ಮತ್ತು ಹಳೆಯ ಕಾಲದ ಪುಟ್ಟ ಗೋಪುರ, ಅದರ ಮೇಲೊಂದು ಕಲಶ. ಪುಟ್ಟ ಗೋಪುರದ ಸುತ್ತ ಪುಟ್ಟಗೋಡೆ, ಗ್ರಿಲ್- ಇದು ಮಂದಿರದ ಪೂರ್ಣ ರೂಪ. ಮಂದಿರದ ನೆಲದ ಮಟ್ಟ ಮತ್ತು ರಸ್ತೆಯ ಮಟ್ಟ- ಎರಡೂ ಒಂದೇ.

ಸಿದ್ದಿ ವಿನಾಯಕ ಮಂದಿರದ ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ

webdunia
WDWD
ಈ ಮಂದಿರವಿರುವುದು ಮುಂಬಯಿಯ ಪ್ರಭಾದೇವಿ ಎಂಬಲ್ಲಿ ಕಾಕಾಸೇಹೇಬ್ ಗಾಡ್ಗೀಳ್ ಮಾರ್ಗ ಮತ್ತು ಎಸ್.ಕೆ.ಬೋಳೆ ಮಾರ್ಗ ಸೇರುವ ಮೂಲೆಯಲ್ಲಿ. ಇಲ್ಲಿ ಈಗ ಸಂಚಾರ ಸಮಸ್ಯೆ ತಲೆದೋರಿದೆ.

ಈ ಮಂದಿರವನ್ನು ಮಾಟುಂಗಾದ ಅಗ್ರಿ ಸಮಾಜದ ಶ್ರೀಮಂತ ಮಹಿಳೆ ದಿ.ದೇವುಬಾಯಿ ಪಟೇಲ್ ಅವರ ಆರ್ಥಿಕ ಸಹಕಾರ ಮತ್ತು ಸಲಹೆಯನ್ವಯ ಗುತ್ತಿಗೆದಾರ ದಿ.ಲಕ್ಷ್ಮಣ್ ವಿಠು ಪಾಟೀಲ್ ನಿರ್ಮಿಸಿದ್ದರು.

ಆಕೆ ಶ್ರೀಮಂತಳಾಗಿದ್ದರೂ, ಮಕ್ಕಳಿರಲಿಲ್ಲ. ಮಕ್ಕಳಾಗಲು ಗಣೇಶನಿಗೆ ಗುಡಿ ಕಟ್ಟಿಸುವುದಾಗಿ ಆಕೆ ಹರಕೆ ಹೊತ್ತಿದ್ದಳು. ಆದರೆ ದುರದೃಷ್ಟವೋ ಎಂಬಂತೆ ಆಕೆಯ ಪತಿ ಮರಣವನ್ನಪ್ಪಿದರು. ಆದರೆ ಗಣಪತಿಯ ಪರಮ ಭಕ್ತೆಯಾಗಿದ್ದ ಆಕೆ, ಗಣೇಶನಿಗೆ ಗುಡಿ ಕಟ್ಟಿಸುವ ಕಾರ್ಯ ಕೈಗೆತ್ತಿಕೊಂಡಳು.

webdunia
WDWD
ಮನೆಯಲ್ಲಿದ್ದ ಕ್ಯಾಲೆಂಡರಿನಲ್ಲಿ ಕಂಡ ಚಿತ್ರದಂತೆಯೇ ಗಣಪತಿ ವಿಗ್ರಹವನ್ನು ಕೆತ್ತಿಸಿದಳು. ಈ ಕ್ಯಾಲೆಂಡರಿನಲ್ಲಿದ್ದ ಚಿತ್ರವು ಮುಂಬಯಿಯ ವಾಳಕೇಶ್ವರದ ಬಾನ್‌ಗಂಗಾ ಎಂಬಲ್ಲಿದ್ದ, ಸುಮಾರು 500 ವರ್ಷ ಹಳೆಯ ಗಣಪತಿಯದಾಗಿತ್ತೆಂದು ನಂಬಲಾಗಿದೆ.

ಪ್ರಾರ್ಥನೆಯೊಂದರ ಸಂದರ್ಭ ದಿ.ದೇವುಬಾಯಿ ಅವರು ಗಣೇಶನನ್ನು ಸ್ತುತಿಸಿ, "ನನಗೆ ಮಕ್ಕಳಾಗುವುದು ಸಾಧ್ಯವಿಲ್ಲದಿದ್ದರೂ, ಮಕ್ಕಳಿಲ್ಲದ ಇತರ ಸ್ತ್ರೀಯರು ಇಲ್ಲಿಗೆ ಬಂದು ನಿನ್ನನ್ನು ಪ್ರಾರ್ಥಿಸಿದರೆ ಅವರಿಗೆ ಸಂತಾನಭಾಗ್ಯ ಕರುಣಿಸು" ಎಂದು ಪ್ರೀತಿಯ ಗಣೇಶನನ್ನು ಕೋರಿಕೊಂಡಳು.

ಈ ಮಂದಿರದ ಯಶಸ್ವೀ ಇತಿಹಾಸವನ್ನು ಗಮನಿಸಿದರೆ, ದಿವಂಗತ ದೇವುಬಾಯಿ ಪಾಟೀಲ್‌ಳ ಪ್ರಾಮಾಣಿಕ ಮತ್ತು ನಿಸ್ವಾರ್ಥ, ನಿಷ್ಕಳಂಕ ಭಕ್ತಿಯ ಕೋರಿಕೆಯನ್ನು ಗಣಪತಿ ಈಡೇರಿಸುತ್ತಿದ್ದಾನೆ ಎಂಬುದು ವೇದ್ಯವಾಗುತ್ತದೆ. ಈ ಕಾರಣದಿಂದ ಇಲ್ಲಿನ ಸಿದ್ಧಿವಿನಾಯಕನು ಸಂತಾನಭಾಗ್ಯ ಕರುಣಿಸುತ್ತಾನೆ ಎಂಬುದು ಭಕ್ತರ ಬಲವಾದ ನಂಬಿಕೆ. ಮಾತ್ರವಲ್ಲ "ನವಸಾಚ ಗಣಪತಿ" ಅಥವಾ "ನವಸಾಲ ಪಾವನಾರ ಗಣಪತಿ" (ನಿಷ್ಕಲ್ಮಷ ಹೃದಯದಿಂದ ಬೇಡಿಕೊಂಡರೆ ಒಲಿಯುವ ಗಣಪತಿ) ಎಂದು ಮರಾಠಿಯಲ್ಲಿ ಕರೆಯಲ್ಪಡುತ್ತಾನೆ.

ಇಲ್ಲಿಗೆ ಹೋಗುವುದು ಹೇಗೆ?: ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬಯಿಯು ಭೂ, ವಾಯು ಮತ್ತು ರೈಲುಮಾರ್ಗಗಳ ಮೂಲಕ ದೇಶದ ಪ್ರಮುಖ ಪಟ್ಟಣಗಳಿಂದ ಸಂಪರ್ಕಿತವಾಗಿದೆ.

ಎಲ್ಲಿ ಉಳಿದುಕೊಳ್ಳುವುದು?: ಮಂದಿರದಿಂದಲೇ ಯಾವುದೇ ಧರ್ಮಛತ್ರ ಅಥವಾ ಯಾತ್ರಾಗೃಹಗಳಿಲ್ಲದಿದ್ದರೂ, ಸುತ್ತ ಮುತ್ತ ಬಜೆಟಿಗೆ ತಕ್ಕಂತೆ ಹೋಟೆಲ್‌ಗಳು, ಧರ್ಮಶಾಲೆಗಳು, ಮತ್ತು ಲಾಡ್ಜ್‌ಗಳು ಸಾಕಷ್ಟಿವೆ.

ಸಿದ್ದಿ ವಿನಾಯಕ ಮಂದಿರದ ಪೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ

Share this Story:

Follow Webdunia kannada