ಬೆಂಗಳೂರು: ಮಳೆಗಾಲದ ಸಮಯದಲ್ಲಿ ಸವಿಯಲು ಬೇಸಿಗೆ ಕಾಲದಲ್ಲಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇನ್ನೇನು ಹಲಸಿನಕಾಯಿ, ಮಾವಿನಕಾಯಿ ಸೀಸನ್ ಶುರುವಾಗುತ್ತದೆ.
ಮಳೆಗಾಲಕ್ಕೆ ತಯಾರಿಸುವ ತಿನಿಸುಗಳಲ್ಲಿ ಸಂಡಿಗೆ ಕೂಡಾ ಒಂದಾಗಿದೆ. ಹಲವು ವಿಧದಲ್ಲಿ ಸಂಡಿಗೆಯನ್ನು ತಯಾರಿಸಲಾಗುತ್ತದೆ. ಮನೆಯಲ್ಲಿಯೇ ತಯಾರಿಸುವುದರಿಂದ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಅದಲ್ಲದೆ ಮಳೆಗಾಲದಲ್ಲಿ ಊಟದ ಜತೆ ಸವಿಯಲು ಸೂಪರ್ ಆಗಿರುತ್ತದೆ.
ಇವತ್ತು ಸಿಂಪಲ್ ಆಗಿ ಈರುಳ್ಳಿ ಸಂಡಿಗೆಯನ್ನು ಹೇಗೆ ಮಾಡಬಹುದು ಎಂದು ನೋಡೋಣ. ಇದೀಗ ಮಾರುಕಟ್ಟೆಯಲ್ಲಿ ಈರುಳ್ಳಿಗೂ ಬೆಲೆ ತಗ್ಗಿರುವುದಿರಂದ, ಬಿಸಿಲು ಜಾಸ್ತಿಯಾಗಿರುವುದರಿಂದ ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ.
ಬೇಕಾಗುವ ಸಾಮಾಗ್ರಿಗಳು
ಒಂದು ಕಪ್ ಈರುಳ್ಳಿ
ಒಂದು ಕಪ್ ಬೆಳ್ತಿಗೆ ಅಕ್ಕಿ
ರುಚಿಗೆ ಉಪ್ಪು
ಬ್ಯಾಡಿಗೆ ಮೆಣಸು 5ರಿಂದ 6
ಮಾಡುವ ವಿಧಾನ:
ಅಕ್ಕಿಯನ್ನು 6ರಿಂದ 7 ಗಂಟೆ ನೆನೆಸಿಡಿ. ನಂತರ ಅದನ್ನು ಚೆನ್ನಾಗಿ ತೊಳೆದು ಮೆಣಸು ಹಾಕಿ ರುಬ್ಬಿ.
ನೀರು ದೋಸೆ ಹದಕ್ಕೆ ಮಿಶ್ರಣ ಮಾಡಿ. ನಂತರ ಒಂದು ಪಾತ್ರೆಗೆ ಮೂರು ಕಪ್ ನೀರು ಹಾಕಿ, ಬಿಸಿ ಮಾಡಿ. ಇದೀಗ ನೀರನ್ನು ಲೋ ಪ್ಲೇಂನಲ್ಲಿ ಇಟ್ಟು, ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕುದಿಸಿ. ಗಟ್ಟಿ ಹದಕ್ಕೆ ಬಂದ ಮೇಲೆ ಸ್ಟೌನ್ನು ಆಫ್ ಮಾಡಿ.
ಇದೀಗ ಸಣ್ಣದಾಗಿ ಕಟ್ ಮಾಡಿದ ಈರುಳ್ಳಿಯನ್ನು ಬೇಯಿಸಿದ ಮಿಶ್ರಣಕ್ಕೆ ಹಾಕಿ, ರಾತ್ರಿಯಿಡಿ ಹಾಗೆಯೇ ಬಿಡಿ. ಮಾರನೇ ದಿನ ಬೆಳಗ್ಗೆ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಅದನ್ನು ಸಂಡಿಗೆ ಆಕಾರದಲ್ಲಿ ಪ್ಲಾಸ್ಟಿಕ್ ಅಥವಾ ಬಟ್ಟೆಯ ಮೇಲೆ ಒಣಗಿಸಿ.