Publish Date: Fri, 16 May 2014 (10:19 IST)
Updated Date: Fri, 16 May 2014 (14:49 IST)
ಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪಾಲಿಗೆ ಮೊದಲ ಸಿಹಿ ಸುದ್ದಿ ಹೊರಬಿದ್ದಿದೆ. ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯೆಂದೇ ಬಿಂಬಿಸಲಾಗಿದ್ದ ನರೇಂದ್ರ ಮೋದಿಯವರು, ತಮ್ಮ ತವರು ಗುಜರಾತ್ ರಾಜ್ಯದ ವಡೋದರ ಕ್ಷೇತ್ರದಲ್ಲಿ ಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್ನ ಪ್ರತಿಸ್ಪರ್ಧಿ ಮಧುಸೂದನ್ ಮಿಸ್ತ್ರಿಯವರನ್ನು ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ. ಇದು ಸ್ವತಃ ಮೋದಿಯವರ ಮುಂದಿನ ರಾಜಕೀಯ ನಡೆಗೆ ಸುಗಮವಾಗಲಿದೆ. ನರೇಂದ್ರ ಮೋದಿಯವರು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ವಡೋದರಾದಲ್ಲಿ ಜಯಶೀಲರಾಗಿದ್ದು, ಮತ್ತೊಂದು ಪ್ರಮುಖ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಒಟ್ಟಾರೆ ದೇಶದಲ್ಲಿ ಬಿಜೆಪಿ ಪಕ್ಷವು ಇನ್ನಿಲ್ಲದಂತೆ ಮುನ್ನಡೆಯನ್ನು ಸಾಧಿಸಿದೆ. ಸತತ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷವು ಭದ್ರಕೋಟೆಗಳಲ್ಲಿಯೇ ಮಣ್ಣು ಮುಕ್ಕುವ ಸಾಧ್ಯತೆಗಳು ಹೆಚ್ಚಾಗಿವೆ. ಲೋಕಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ನರೇಂದ್ರ ಮೋದಿಯವರನ್ನೇ ಗುರಿಯಾಗಿಸಿಕೊಂಡು ಭಾಷಣ ಮಾಡುತ್ತಿದ್ದ ಕಾಂಗ್ರೆಸ್ನ ಯುವರಾಜ ಹಾಗೂ ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿಯಾಗಿದ್ದ ರಾಹುಲ್ ಗಾಂಧಿಯವರು ಸೋಲಿನ ದವಡೆಯಲ್ಲಿ ಸಿಲುಕಿದ್ದಾರೆ.
ಲೋಕಸಭಾ ಚುನಾವಣೆಯ ಕುರಿತ ಹೆಚ್ಚಿನ ಮಾಹಿತಿಗಾಗಿ, ಇಲ್ಲಿಗೆ ಭೇಟಿ ಕೊಡಿ.