2009ರ ನವೆಂಬರ್ ತಿಂಗಳಲ್ಲಿ ಮುಸ್ಲಿಮರು 'ವಂದೇ ಮಾತರಂ' ಹಾಡುವುದರ ವಿರುದ್ಧ ಫತ್ವಾ ಹೊರಡಿಸಿ ಭಾರೀ ವಿವಾದಕ್ಕೆ ಸಿಲುಕಿದ್ದ ಜಮಾತ್ ಉಲೇಮಾ ಇ ಹಿಂದ್ (ಜೆಯುಎಚ್) ಈಗ ದೂರದರ್ಶನ, ಚಲನಚಿತ್ರ ಮತ್ತು ಕಾಂಡೋಮ್ ಬಳಸುವುದು ಇಸ್ಲಾಂ ಪ್ರಕಾರ ತಪ್ಪು ಎಂದು 'ಎಚ್ಚರಿಕೆ' ನೀಡಿದೆ.
ಕಳೆದ ವಾರ ದೆಹಲಿಯಲ್ಲಿ ನಡೆದ ಜಮಾತ್ ಉಲೇಮಾ ಇ ಹಿಂದ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ಎಚ್ಚರಿಕೆಯನ್ನು ಮುಸ್ಲಿಮರಿಗೆ ರವಾನಿಸಲಾಗಿದೆ.
ಟಿವಿ, ಸಿನಿಮಾ ವೀಕ್ಷಣೆ, ಕಾಂಡೋಮ್ ಮುಸ್ಲಿಮರಿಗೆ ನಿಷಿದ್ಧ. ಅವುಗಳು ಸೈತಾನನ ಸಾಧನಗಳು. ಹಾಗಾಗಿ ಅವುಗಳನ್ನು ಸಾಧ್ಯವಾದಷ್ಟು ಹೂತು ಹಾಕಲು ಯತ್ನಿಸಬೇಕು ಎಂದು ಜಮಾತ್ ಉಲೇಮಾ ಇ ಹಿಂದ್ನ ಮಹಮ್ಮದ್ ಮದನಿ ಬಣವು ಘೋಷಿಸಿದೆ.
ಟಿವಿಗಳ ವಿರುದ್ಧ ಹೋರಾಟ ನಡೆಸುವ ಪ್ರಸ್ತಾಪವೂ ಈ ಸಂಘಟನೆಯ ಮುಂದಿದೆ. ಮಾಧ್ಯಮಗಳು ಆಯ್ದ ಕೆಲ ವಿಚಾರಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿರುವ ವಿಚಾರ ಕೂಡ ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಚರ್ಚೆಯಾಗಿದೆ. ಈ ಕುರಿತು ನಿರ್ಣಯಗಳನ್ನು ಕೂಡ ಅಂಗೀಕರಿಸಲಾಗಿದೆ. ಆದರೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಅಗತ್ಯವಾಗಿರುವ ಮೀಸಲಾತಿ ಬೇಡಿಕೆ ಇಲ್ಲಿ ಮಹತ್ವ ಪಡೆದು ಚರ್ಚೆಯಾಗಿಲ್ಲ.
ಮುಸ್ಲಿಂ ಸಮಾಜವು ಇಸ್ಲಾಂ ಕಾನೂನು ಮತ್ತು ಸಾಮಾಜಿಕ ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವುದರ ಸಂಪ್ರದಾಯ ಭ್ರಷ್ಟತೆಯ ವಿರುದ್ಧ ಗಂಭೀರ ಚರ್ಚೆಗಳು ಈ ಸಭೆಯಲ್ಲಿ ನಡೆದವು. ಈ ಸಂಬಂಧ ಸಮಿತಿಯೊಂದನ್ನು ರಚಿಸುವ ನಿರ್ಧಾರಕ್ಕೂ ಬರಲಾಯಿತು. ಸಮಿತಿಯು ತನ್ನ ಕಾರ್ಯಕ್ರಮಗಳು, ಸಭೆಗಳು ಮತ್ತು ಸಾಹಿತ್ಯಗಳ ಮೂಲಕ ಮುಸ್ಲಿಮರಿಗೆ ಹಿತವಚನ ಹೇಳುವ ನಿರ್ಣಯ ಅಂಗೀಕರಿಸಲಾಯಿತು.
ಸಿನಿಮಾವನ್ನು ನೋಡಬಾರದು, ಟಿವಿಯತ್ತ ಸುಳಿಯಬಾರದು, ನೈತಿಕ ಹತ್ಯೆಯಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಏಡ್ಸ್ ತಡೆಗಟ್ಟಲು ಪ್ರಸಕ್ತ ಇರುವ ಮಾರ್ಗೋಪಾಯಗಳನ್ನು (ಕಾಂಡೋಮ್ ಬಳಕೆ) ಉಪೇಕ್ಷಿಸಬೇಕು. ಅದರ ಬದಲು ಇಂತಹ ವಿಚಾರಗಳಲ್ಲಿ ಲೈಂಗಿಕ ನೈತಿಕತೆಯ ಕುರಿತು ಇಸ್ಲಾಂ ಹೇಳುವ ಮಾರ್ಗವನ್ನು ಅನುಸರಿಸಿ ಎಂದೂ ಸಲಹೆ ನೀಡಲಾಯಿತು.
ಭಯೋತ್ಪಾದನೆಯ ಸುಳ್ಳು ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಅಮಾಯಕ ಮುಸ್ಲಿಂ ಯುವಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಸ್ಟ್ರೇಲಿಯಾ ಸರಕಾರವು ಮೊಹಮ್ಮದ್ ಹನೀಫ್ ಪ್ರಕರಣದಲ್ಲಿ ನೀಡಿದ ರೀತಿಯ ಪರಿಹಾರವನ್ನು ಅವರಿಗೆ ನೀಡಬೇಕು. ಹಜ್ ಯಾತ್ರಿಗಳಿಗೆ ಅತ್ಯುತ್ತಮ ವಾಯುಯಾನ ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕು. ಹಜ್ ಸಮಿತಿಗಳಿಗೆ ಇನ್ನಷ್ಟು ಹೆಚ್ಚಿನ ಅಧಿಕಾರ ನೀಡಬೇಕು. ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸಬೇಕು. ವಕ್ಫ್ ಆಸ್ತಿಗಳ ದುರುಪಯೋಗ ಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯಗಳನ್ನು ಕೂಡ ಅಂಗೀಕರಿಸಲಾಗಿದೆ.