Select Your Language

Notifications

webdunia
webdunia
webdunia
webdunia

ಜಪಾನ್ ಸುನಾಮಿ ಭಾರತದಲ್ಲಿ ಸಂಭವಿಸುತ್ತಿದ್ದರೆ...?

ಭಾರತ
ನವದೆಹಲಿ , ಶನಿವಾರ, 12 ಮಾರ್ಚ್ 2011 (16:48 IST)
PR

ನಿನ್ನೆಯ ದಿನ ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ಭಾರತಕ್ಕೆ ಅಪ್ಪಳಿಸಿದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಹೀಗೊಂದು ಅವಲೋಕನಕ್ಕಿಳಿದರೆ, ಭಾರತದ ಜನಸಂಖ್ಯೆ, ತಂತ್ರಜ್ಞಾನ, ಮೂಲಭೂತ ಸೌಕರ್ಯ, ಪ್ರಕೃತಿ ವಿಕೋಪದ ಕುರಿತ ಅರಿವು, ನಮ್ಮ ಪರಿಸ್ಥಿತಿ, ಅದಕ್ಕೂ ಹೆಚ್ಚಾಗಿ ನಾವು ಕಾನೂನುಗಳನ್ನು ಪಾಲಿಸುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿದರೆ, ಲಕ್ಷಾಂತರ ಮಂದಿಯ ಆಹುತಿ ನಡೆಯುತ್ತಿತ್ತು ಎನ್ನುವುದು ನಿರ್ವಿವಾದವಾಗಿ ಸಿಗುವ ಸುಲಭ ಉತ್ತರ!

ಅದೆಷ್ಟೇ ಬಾಂಬ್ ದಾಳಿ, ಪ್ರಕೃತಿ ವಿಕೋಪಗಳು ಎದುರಾದರೂ ಏನೂ ಆಗದಂತೆ ಸುಧಾರಿಸಿಕೊಂಡು ನಡೆದುಕೊಂಡು ಬಂದಿರುವ, ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಉಳಿಸಿಕೊಂಡಿರುವ ದೇಶ ಜಪಾನ್. ಅಂತಹ ದೇಶವೇ ನಿನ್ನೆಯ ದಿನ ಸುನಾಮಿಯ ರೌದ್ರಾವತಾರಕ್ಕೆ ತತ್ತರಿಸಿದೆ. ಆದರೆ, ಹೆಚ್ಚಿನ ಪ್ರಾಣಾಪಾಯಗಳು ಆಗದಂತೆ ಅದು ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೆಲವೇ ಸಾವಿರಕ್ಕೆ ಸಾವಿನ ಸಂಖ್ಯೆ ಸೀಮಿತಗೊಂಡಿದೆ. ಇದಕ್ಕೆ ಕಾರಣಗಳು ಹಲವು.

ಮೊದಲನೆಯದಾಗಿ ಆ ದೇಶದಲ್ಲಿನ ಜನಸಂಖ್ಯೆ; ಜಪಾನಿಗರ ಸಾಕ್ಷರತೆಯ ಪ್ರಮಾಣ; ತಂತ್ರಜ್ಞಾನ ಮತ್ತು ಅದರ ಬಗ್ಗೆ ಇರುವ ಅರಿವು; ಸರಕಾರದ ಕಾನೂನುಗಳನ್ನು ಪಾಲಿಸುವ, ಆದೇಶಗಳನ್ನು ಗೌರವಿಸುವ ರೀತಿ- ಇವೆಲ್ಲವೂ ಸಾವಿನ ಸಂಖ್ಯೆಯನ್ನು ಕೆಲವೇ ಸಾವಿರಗಳಿಗೆ ಸೀಮಿತಗೊಳಿಸುವಲ್ಲಿ ಕಾರಣಗಳಾಗಿವೆ.

(ಸುದ್ದಿ-ಚಿತ್ರಗಳು ಮುಂದಿನ ಪುಟಗಳಲ್ಲಿ ಮುಂದುವರಿದಿವೆ)


webdunia
PR

ಗಂಟೆಯೊಳಗೆ ವಿಮಾನ ನಿಲ್ದಾಣ ಓಪನ್...
ಸೆಂಡಾಯ್ ವಿಮಾನ ನಿಲ್ದಾಣಕ್ಕೆ ಸುನಾಮಿ ನುಗ್ಗಿ ನಡೆದ ಆವಾಂತರಗಳ ಚಿತ್ರಗಳನ್ನು ಎಲ್ಲರೂ ನೋಡಿರುತ್ತೀರಿ. ವಿಮಾನಗಳು, ಕಾರುಗಳು, ಅವಶೇಷಗಳೆಡೆಯಲ್ಲಿ ಬಿದ್ದಿರುವುದನ್ನು ಗಮನಿಸಿರುತ್ತೀರಿ. ಇದೆಲ್ಲ ನಡೆಯುತ್ತಿದ್ದಂತೆ ಜಪಾನ್ ಕರಾವಳಿಯ ಬಹುತೇಕ ವಿಮಾನ ನಿಲ್ದಾಣಗಳು, ಬಂದರುಗಳು, ರೈಲ್ವೇ ನಿಲ್ದಾಣಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಕೆಲವೇ ಕ್ಷಣಗಳೊಳಗೆ ಅವುಗಳಲ್ಲಿ ಬಹುತೇಕವಾದುವು ಕೊಚ್ಚಿ ಹೋಗಿದ್ದವು.

ಅಚ್ಚರಿಯ ವಿಚಾರವೆಂದರೆ, ಸುನಾಮಿ ಬಂದು ಹೋದ ಗಂಟೆಗಳೊಳಗೆ ಹಾನಿಗೊಂಡ ಹಲವು ವಿಮಾನ ನಿಲ್ದಾಣಗಳು ಮರು ಕಾರ್ಯಾಚರಣೆ ಆರಂಭಿಸಿರುವುದು. ಇದನ್ನು ಸ್ವತಃ ಜಪಾನ್ ಟಿವಿ ಚಾನೆಲ್‌ಗಳು ಖಚಿತಪಡಿಸಿವೆ.

webdunia
PR

ಪರಮಾಣು ಅವಘಡವೂ ತಪ್ಪಿ ಹೋಯಿತು...
ಭೂಕಂಪ ಮತ್ತು ಸುನಾಮಿಯಿಂದಾಗಿ ಜಪಾನ್‌ ಕರಾವಳಿಯಲ್ಲಿನ ಐದು ಪರಮಾಣು ಸ್ಥಾವರಗಳು ಭಾರೀ ಅಪಾಯಕ್ಕೆ ಸಿಲುಕಿದ್ದವು. ಅವುಗಳಲ್ಲಿ ಎರಡು ಸ್ಥಾವರಗಳ ಸುರಕ್ಷತೆಯ ಭರವಸೆಯಂತೂ ಸಂಪೂರ್ಣವಾಗಿ ಕ್ಷೀಣಿಸಿತ್ತು.

ಆ ಸ್ಥಾವರಗಳಲ್ಲಿನ ಶೀತಲ ಘಟಕವು ವಿಫಲಗೊಂಡಿತ್ತು. ಕೆಲವು ಘಟಕಗಳಲ್ಲಿ ಬೆಂಕಿಯೂ ಹತ್ತಿಕೊಂಡಿತ್ತು. ಇದು ಇದೇ ರೀತಿ ಮುಂದುವರಿಯುತ್ತಿದ್ದರೆ, ವಿಕಿರಣ ಸೋರಿಕೆ, ಪರಮಾಣು ಅವಘಡವೇ ನಡೆದು ಹೋಗುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಕಾರ ಪಡೆದುಕೊಂಡ ಜಪಾನ್, ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಬಹುತೇಕ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಪರಮಾಣು ಘಟಕವೊಂದರಲ್ಲಿ ಸ್ಫೋಟ ಸಂಭವಿಸಿದೆ. ಇದು ಇನ್ನೂ ಖಚಿತವಾಗಿಲ್ಲ.

webdunia
PR

ಜನಸಂಖ್ಯೆಯದ್ದೂ ಪ್ರಮುಖ ಪಾತ್ರ...
3,287,263 ಚದರ ಕಿಲೋ ಮೀಟರ್ ವಿಸ್ತೀರ್ಣದ ಭೂ ಪ್ರದೇಶ ಹೊಂದಿರುವ ದೇಶ ಭಾರತ. ಕೇವಲ 377,873 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ದೇಶ ಜಪಾನ್. ನಮ್ಮ ದೇಶದ ಜನಸಂಖ್ಯೆ 120 ಕೋಟಿ, ಜಪಾನ್ ಜನಸಂಖ್ಯೆ ಕೇವಲ 13 ಕೋಟಿ.

ಜಪಾನ್ ಪ್ರಜೆಯೊಬ್ಬನ ಸರಾಸರಿ ತಲಾ ವಾರ್ಷಿಕ ಆದಾಯವು ಭಾರತೀಯನಿಗಿಂತ ಹತ್ತಕ್ಕೂ ಹೆಚ್ಚು ಪಟ್ಟು ಅಧಿಕವಾಗಿದೆ. ಜಪಾನ್‌ನ ಸಾಕ್ಷರತೆಯ ಪ್ರಮಾಣ ಶೇ.99ಕ್ಕಿಂತಲೂ ಹೆಚ್ಚು ಇದ್ದರೆ, ಭಾರತದ ಸಾಕ್ಷರತೆಯ ಪ್ರಮಾಣ ಶೇ.70ಕ್ಕಿಂತಲೂ ಕಡಿಮೆ.

webdunia
PR

ಕಾನೂನುಗಳು ಕಠಿಣ-ಪಾಲನೆಯಲ್ಲೂ ಶಿಸ್ತು...
ಜಪಾನ್ ಕಟ್ಟಡಗಳನ್ನು ಕಟ್ಟುವಾಗ ನಿರ್ದಿಷ್ಟ ನಿಯಮಗಳನ್ನು ಅನುಸರಿಸಬೇಕು ಎಂದು ಕಾನೂನು ರೂಪಿಸಿದೆ. ಭಾರತದಲ್ಲಿ ಕಾನೂನು ಮತ್ತು ಅದು ಜಾರಿಗೆ ಬರುವಲ್ಲಿ ಇರುವಂತಹಾ ವ್ಯತ್ಯಾಸ ಅಲ್ಲಿಲ್ಲ. ಭಾಗಶಃ ಮಂದಿ ಸರಕಾರವು ರೂಪಿಸುವ ನೀತಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಸಾಕ್ಷರರಾಗಿರುವುದರಿಂದ ಅವರಿಗೆ ನಿಯಮಗಳ ಹಿಂದಿನ ಉದ್ದೇಶವೂ ಸ್ಪಷ್ಟವಾಗಿರುತ್ತದೆ.

ಬಹುಮಹಡಿ ಕಟ್ಟಡಗಳ ಸುತ್ತ ಅಗ್ನಿಶಾಮಕ ದಳ ವಾಹನ ತೆರಳುವಷ್ಟು ಜಾಗ ಬಿಡಬೇಕೇಂಬ ಕಾನೂನು ಭಾರತದ ಹಲವು ಮಹಾನಗರ ಪಾಲಿಕೆಗಳಲ್ಲಿದೆ. ಆದರೆ ಅದನ್ನು ಪಾಲಿಸುವ ಮಂದಿ ಎಲ್ಲಿದ್ದಾರೆ? ನಮ್ಮ ಬಿಲ್ಡರುಗಳು ಎಲ್ಲಿ ಸರಕಾರಿ ನೀತಿಗಳನ್ನು ಅನುಸರಿಸುತ್ತಾರೆ?

ಆದರೆ ಭೂಕಂಪಗಳ ಕೇಂದ್ರವಾಗಿರುವ, ಇಡೀ ಜಗತ್ತಿನ ಒಟ್ಟು ಭೂಕಂಪಗಳಲ್ಲಿ ಶೇ.20ರಷ್ಟನ್ನು ಎದುರಿಸುವ ಜಪಾನ್ ಹಾಗಲ್ಲ. ಅದು ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸೂಕ್ತವಾದ ಕಟ್ಟಡ ವಿನ್ಯಾಸಗಳನ್ನು ರೂಪಿಸಿ, ಪ್ರಜೆಗಳು ಅದನ್ನೇ ಪಾಲಿಸಬೇಕು ಎಂದು ಕಠಿಣ ನೀತಿಗಳನ್ನು ರೂಪಿಸಿದೆ ಮತ್ತು ಅದನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಇದು ಕೂಡ ಸಾವಿನ ಸಂಖ್ಯೆ ಹೆಚ್ಚಾಗದಿರಲು ಒಂದು ಕಾರಣ.

ಭೂಕಂಪ ಮತ್ತು ಸುನಾಮಿಗಳು ಬಂದರೆ, ಅದರಿಂದ ಪಾರಾಗುವಂತಹ ಕಟ್ಟಡಗಳನ್ನು ನಿರ್ಮಿಸುವ ತಂತ್ರಜ್ಞಾನಕ್ಕಾಗಿ ಜಪಾನ್ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯಯಿಸಿದೆ. ಅದೇ ಕಾರಣದಿಂದ ಜಪಾನ್ ಹೊರತುಪಡಿಸಿ ಬೇರೆ ಯಾವುದೇ ದೇಶವಾಗಿದ್ದರೂ, 8.9 ತೀವ್ರತೆಯ ಭೂಕಂಪದಿಂದ ಉಳಿಯುವುದು ಸಾಧ್ಯವಿರಲಿಲ್ಲ. ಸುನಾಮಿ ಆ ದೇಶಕ್ಕೆ ದೊಡ್ಡ ಆಘಾತ ಎನ್ನುವುದು ನಿಜವಾಗಿದ್ದರೂ, ಹಿರೋಷಿಮಾ-ನಾಗಸಾಕಿಗೆ ಬಿದ್ದ ಅಣು ಬಾಂಬ್ ದಾಳಿಯಿಂದಲೇ ಚೇತರಿಸಿಕೊಂಡಿದ್ದ ಜಪಾನ್‌ಗೆ, ಇದು ದಶಕಗಳಷ್ಟು ಹಿನ್ನಡೆ ಒದಗಿಸಿತು ಎಂದೇನೂ ಭಾವಿಸಬೇಕಾಗಿಲ್ಲ.

webdunia
PR

ಭಾರತದ ಸುನಾಮಿ ಎಚ್ಚರಿಕೆ ಘಟಕ ಹೇಗಿದೆ?
ಆರೂವರೆ ವರ್ಷಗಳ ಹಿಂದಿನ ಮಾತಾದರೆ, ಭಾರತದಲ್ಲಿ ಸುನಾಮಿ ಅಥವಾ ಭೂಕಂಪಗಳ ಕುರಿತು ಮುನ್ನೆಚ್ಚೆರಿಕೆ ನೀಡುವ ಅಂತಹ ಘಟಕಗಳು ಅಥವಾ ತಂತ್ರಜ್ಞಾನದ ಕೊರತೆಯಿತ್ತು. ಸುನಾಮಿ ಎಂದರೇನೆಂದೇ ತಿಳಿಯದಿರುವ ಮಟ್ಟಿಗೆ ನಾವಿದ್ದೆವು. ಆದರೆ ಈಗ ಹಾಗಲ್ಲ. ಭಾರತ ಬಿಡಿ, ಪಕ್ಕದ ರಾಷ್ಟ್ರಗಳಿಗೂ ಮಾಹಿತಿ ನೀಡುವಷ್ಟು ತಂತ್ರಜ್ಞಾನ ಭಾರತದಲ್ಲಿದೆ.

ಹೈದರಾಬಾದಿನ ಇಂಡಿಯನ್ ನ್ಯಾಷನಲ್ ಸೆಂಟರಿನಲ್ಲಿ ಸುನಾಮಿ ಮುನ್ನೆಚ್ಚೆರಿಕಾ ಕೇಂದ್ರವಿದೆ. ಕಳೆದ ಮೂರು ವರ್ಷಗಳಲ್ಲಿ 25ರಿಂದ 30 ಪ್ರಮುಖ ಭೂಕಂಪಗಳ ಮಾಹಿತಿಗಳನ್ನು ಈ ಕೇಂದ್ರ ನೀಡಿದೆ. ಆ ನಿಟ್ಟಿನಲ್ಲಿ ಭಾರತವು ಹಿಂದೆ ಬಿದ್ದಿಲ್ಲ.

ಜಪಾನ್‌ನಲ್ಲಿ ಸಂಭವಿಸಿದ 8.9 ತೀವ್ರತೆಯ ಭೂಕಂಪದಿಂದ ಭಾರತಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಈ ಕೇಂದ್ರ ಸ್ಪಷ್ಟವಾಗಿ ಹೇಳಿದೆ. ನಾವು ಇದುವರೆಗೆ ಶೇ.100ರಷ್ಟು ಸುರಕ್ಷಿತರು. ಇದುವರೆಗೆ ಯಾವುದೇ ಎಚ್ಚರಿಕೆಯನ್ನು ನಾವು ರವಾನಿಸಿಲ್ಲ ಎಂದು ಇದರ ನಿರ್ದೇಶಕ ಸತೀಶ್ ಶೆಣೈ ಹೇಳಿದ್ದಾರೆ.

webdunia
PR

ನಾವು ಫಿಲಿಪೈನ್ಸ್‌ನಿಂದ ಹವಾಯ್ ದ್ವೀಪಗಳವರೆಗೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. 2007ರಿಂದ ನಾವು ಜಗತ್ತಿನ ಇತರ ಸುನಾಮಿ ಎಚ್ಚರಿಕಾ ಕೇಂದ್ರಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಶೈಲೇಶ್ ನಾಯ್ಕ್ ತಿಳಿಸಿದ್ದಾರೆ.

ಆದರೆ ಇನ್ನೊಂದು ವರದಿಯ ಪ್ರಕಾರ, ಭಾರತದ ಸುನಾಮಿ ಎಚ್ಚರಿಕೆಯ ವ್ಯವಸ್ಥೆ ತೀರಾ ದುರ್ಬಲವಾಗಿದೆ. ಸಾಗರದಲ್ಲಿ ಸುನಾಮಿಯ ಕುರಿತು ಮುನ್ನೆಚ್ಚೆರಿಕೆ ನೀಡಲೆಂದು ಹಾಕಲಾಗಿರುವ ತೇಲುಬುರುಡೆಗಳು ಶಿಥಿಲಗೊಂಡಿವೆ. ಇದಕ್ಕೆ ಕಾರಣ ಮೀನುಗಾರರು. ತೇಲುಬುರುಡೆಗಳಲ್ಲಿನ ಲೋಹದ ಆಸೆಗಾಗಿ ಮೀನುಗಾರರು ಅದನ್ನು ಒಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

ಬಂಗಾಲ ಕೊಲ್ಲಿಯಲ್ಲಿ ಎರಡು ಹಾಗೂ ಅರೇಬಿಯನ್ ಸಮುದ್ರದಲ್ಲಿ ಒಂದು ಇಂತಹ ಎಚ್ಚರಿಕೆಯನ್ನು ನೀಡುವ ವ್ಯವಸ್ಥೆಗಳನ್ನು ಭಾರತ ಹೊಂದಿದೆ. ಇಲ್ಲಿ ತೇಲುಬುರುಡೆಗಳಿಗೆ ಸಿಗುವ ಸಂಕೇತಗಳು ನೇರವಾಗಿ ಕೃತಕ ಉಪಗ್ರಹಗಳಿಗೆ ರವಾನೆಯಾಗುತ್ತದೆ. ಅಲ್ಲಿಂದ ಎಚ್ಚರಿಕೆಯ ಸಂದೇಶಗಳು ಭೂಮಿಯ ಮೇಲಿನ ಎಚ್ಚರಿಕಾ ಕೇಂದ್ರಗಳಿಗೆ ಕಳುಹಿಸಲ್ಪಡುತ್ತದೆ.

webdunia
PR

ಇತರ ಕಾರಣಗಳು...
ಭಾರತದ ಮುನ್ನೆಚ್ಚೆರಿಕಾ ಘಟಕ ಅತ್ಯುತ್ತಮವಾಗಿದೆ ಎಂದು ಪರಿಗಣಿಸಿದರೂ, ಇತರ ಹಲವು ಕಾರಣಗಳು ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಬಹುದು.

ಸುನಾಮಿ ಮುನ್ನೆಚ್ಚೆರಿಕಾ ಕೇಂದ್ರವು ಕಟ್ಟೆಚ್ಚರ ರವಾನಿಸಿದ ನಂತರ ಕರಾವಳಿ ಪ್ರದೇಶದ ಜನರನ್ನು ಬೇರೆಡೆಗೆ ಸಾಗಿಸಬೇಕಾಗುತ್ತದೆ. ಆಗ ಪ್ರಮುಖವಾಗಿ ಗಣನೆಗೆ ಬರುವ ಅಂಶಗಳೆಂದರೆ, ಜನರನ್ನು ತೆರವುಗೊಳಿಸಲು ಸೂಕ್ತ ವ್ಯವಸ್ಥೆ, ಮೂಲಭೂತ ಸೌಕರ್ಯ ಮತ್ತು ಜನರಲ್ಲಿ ಪ್ರಕೃತಿ ವಿಕೋಪದ ಬಗ್ಗೆ ಇರುವ ಅರಿವು. ಈ ಪ್ರಮಾಣ ಜಪಾನ್‌ಗೆ ಹೋಲಿಸಿದರೆ, ಭಾರತದಲ್ಲಿ ತೀರಾ ಕಡಿಮೆ.

ಜಪಾನ್‌ನಲ್ಲಿ ಭೂಕಂಪ ಎನ್ನುವುದು ವಿಶೇಷವಲ್ಲ, ಆದರೂ ಅಲ್ಲಿನ ಜನ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಸರಕಾರವು ಜನರನ್ನು ತೆರವುಗೊಳಿಸುವ ಆದೇಶ ನೀಡಿದರೆ, ಅದನ್ನು ಚಾಚೂ ತಪ್ಪದೆ ಪಾಲಿಸುವ ಮಂದಿಯೇ ಅಧಿಕವಾಗಿರುತ್ತಾರೆ. ಇದೇ ಕಾರಣದಿಂದ ನಿನ್ನೆ ನಡೆದ ಭೂಕಂಪ-ಸುನಾಮಿ ಆ ದೇಶವನ್ನು ಭೀಕರವಾಗಿ ಜರ್ಜರಿತಗೊಳಿಸಿಲ್ಲ.

ಪ್ರಕೃತಿಯೆದುರು ನಾವೇನೂ ಅಲ್ಲ ಎಂಬುದನ್ನು ಈ ಪ್ರಳಯದಂತೆಯೇ ಕಂಡುಬರುವ ಸುನಾಮಿ ತೋರಿಸಿಕೊಟ್ಟಿದೆ. ಹೀಗಿರುವಾಗ ನಮ್ಮ ಉಡಾಫೆಯ ವರ್ತನೆಯೇ ನಮಗೆ ಮುಳುವಾಗದಂತೆ ನೋಡಿಕೊಳ್ಳುವ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಇರಬೇಕಾಗುತ್ತದೆ. ಅಲ್ಲವೇ?

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada