ತಾನಿಗಾಗಲೇ ಮದುವೆಯಾಗಿದ್ದೇನೆ ಎಂಬುದನ್ನು ಮುಚ್ಚಿಟ್ಟು ಮತ್ತೆ ಮದುವೆಯಾಗಲು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಆತನ ಜತೆ ಮದುವೆಯಾಗ ಹೊರಟಿದ್ದ ವಧು ತಕ್ಕ ಪಾಠ ಕಲಿಸಿದ್ದಾಳೆ.
ಮಧ್ಯಪ್ರದೇಶದ ಸಾಗರದಲ್ಲಿ ಈ ಘಟನೆ ನಡೆದಿದ್ದು, ಎಪ್ರಿಲ್ 21 ರಂದು ಅಕ್ಷಯ ತೃತೀಯ ಪುಣ್ಯದಿನದಂದು ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮತ್ತೆ ಮದುವೆಯಾಗ ಹೊರಟಿದ್ದ ಖೇಮ್ಚಂದ್ ಪಟೇಲ್ ಎಂಬಾತನಿಗೆ ವಧು ಕಪಾಳಕ್ಕೆ ಬಾರಿಸಿ ಮಂಟಪದಿಂದ ಹೊರ ನಡೆದಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಂದ್ರಶೇಖರ ವಾರ್ಡ್ ನಿವಾಸಿಯಾದ ಖೇಮ್ಚಂದ್ ಪಟೇಲ್ ನಗರದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳನ್ನು ಮದುವೆಯಾಗ ಹೊರಟಿದ್ದ. ನವ ಜೋಡಿಗಳು ಮದುವೆಯ ಸಂಪ್ರದಾಯವನ್ನು ಪೂರೈಸುವುದರಲ್ಲಿ ವ್ಯಸ್ತರಾಗಿದ್ದಾಗ ಭಗವಾನ್ಗಂಜ್ ನಿವಾಸಿ ಎನ್ನಲಾದ ಮಹಿಳೆಯೊಬ್ಬಳು ಸ್ಥಳಕ್ಕಾಗಮಿಸಿ ಪಟೇಲ್ ತನ್ನ ಗಂಡ ಎಂದು ವಾದಿಸಿದ್ದಾಳೆ.
ಮದುಮಗ ಮತ್ತು ಆ ಮಹಿಳೆಯ ನಡುವೆ ವಾಗ್ವಾದ ತೀವೃವಾಗುತ್ತಿದ್ದಂತೆ ಅದನ್ನೆಲ್ಲ ಗಮನಿಸುತ್ತಿದ್ದ ವಧು ಮುಂದೆ ಬಂದು ಪಟೇಲ್ ಕಪಾಳಕ್ಕೆ ಎಲ್ಲರೆದುರು ಬಾರಿಸಿದ್ದಾಳೆ. ಏಕಾಯೇಕಿ ನಡೆದ ಈ ಗಲಾಟೆಯಿಂದ ಆಘಾತಕ್ಕೀಡಾದ ಸಂಘಟನಾಕಾರರಾದ ಸಾಗರ್ ಮುನ್ಸಿಪಲ್ ಕಾರ್ಪೋರೇಶನ್ನವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಮಹಿಳೆ ತಮ್ಮಿಬ್ಬರಿಗೆ ಮದುವೆಯಾಗಿದೆ ಎಂಬುದನ್ನು ಸಾಬೀತು ಪಡಿಸಲು ದಾಖಲೆಯನ್ನು ಸಹ ಪ್ರಸ್ತುತ ಪಡಿಸಿದಳು. ಸ್ಥಳದಲ್ಲಿದ್ದ ಪೊಲೀಸರು ಅವರಿಬ್ಬರನ್ನು ಠಾಣೆಗೆ ಕರೆದೊಯ್ದರು.
ಆಘಾತಕಾರಿ ಸಂಗತಿ ಎಂದರೆ ಸಾಮೂಹಿಕ ವಿವಾಹದಲ್ಲಿ ಎರಡೇ ಮದುವೆಯಾಗಲು ಹೊರಟವರಲ್ಲಿ ಪಟೇಲ್ ಒಬ್ಬನೇ ಆಗಿರಲಿಲ್ಲ. ಆತನನ್ನು ಹೊರತು ಪಡಿಸಿ ಮತ್ತೆ ಕನಿಷ್ಠ 6 ಜನರು ಮರು ಮದುವೆಯಾಗಲು ಪ್ರಯತ್ನಿಸಿ ಸಂಘಟಕರ ಕೈಯ್ಯಲ್ಲಿ ಸಿಕ್ಕಿ ಬಿದ್ದರು.