Publish Date: Sat, 29 Aug 2026 (10:50 IST)
Updated Date: Sat, 29 Aug 2026 (10:54 IST)
ಮೀರತ್: ಶಾಲೆಯಲ್ಲಿ ಶಿಕ್ಷಕನೋರ್ವ ಬಾಲಕನಿಗೆ ಕ್ರೂರವಾಗಿ ದೈಹಿಕ ಶಿಕ್ಷೆ ನೀಡಿದ ಘಟನೆ ಮೀರತ್ನ ಹಸ್ತಿನಾಪುರದಲ್ಲಿರುವ 'ಪಿಎಂ ಶ್ರೀ ರಾಜಕೀಯ ಇಂಟರ್ ಕಾಲೇಜಿ'ನಲ್ಲಿ ನಡೆದಿದೆ. ಎಂಟನೇ ತರಗತಿಯ 13 ವರ್ಷದ ವಿದ್ಯಾರ್ಥಿಗೆ ಶಿಕ್ಷಕ ಕೇವಲ 39 ಸೆಕೆಂಡುಗಳಲ್ಲಿ 17 ಬಾರಿ ಮುಖಕ್ಕೆ ಕಪಾಳಮೋಕ್ಷ ಮಾಡಿ, ಗುದ್ದಿ ಕ್ರೌರ್ಯ ಮೆರೆದಿದ್ದಾನೆ. ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಘಟನೆ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಖ್ದೂಂಪುರ ಕಾಲೋನಿಯ ನಿವಾಸಿ ರಮೇಶ್ ಎಂಬುವವರ ಮಗ ಈ ಹಲ್ಲೆಗೊಳಗಾದ ವಿದ್ಯಾರ್ಥಿ. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ತರಗತಿಗೆ ಬಂದ ಶಿಕ್ಷಕ, ಯಾವುದೇ ಸೂಕ್ತ ಕಾರಣವಿಲ್ಲದೆ ಮಗನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ ಎಂದು ತಂದೆ ಆರೋಪಿಸಿದ್ದಾರೆ.
ಶಿಕ್ಷಕ ಬಾಲಕನ ಕೆನ್ನೆಗೆ ಬಾರಿಸಿ, ಬಾಯಿಗೆ ಗುದ್ದಿದ್ದಾನೆ. ಭಯಗೊಂಡ ವಿದ್ಯಾರ್ಥಿ ತನ್ನನ್ನು ರಕ್ಷಿಸಿಕೊಳ್ಳಲು ತಲೆ ತಗ್ಗಿಸಿದಾಗ ಶಿಕ್ಷಕ ಇನ್ನಷ್ಟು ಆಕ್ರೋಶಗೊಂಡು ಹಲ್ಲೆ ಮುಂದುವರಿಸಿದ್ದಾನೆ. "ಏನಿದು ಬರೆದಿದ್ದೀಯಾ? ಹೇಳು! ನಿನ್ನನ್ನು ಕಾಲೇಜಿನಿಂದ ತೆಗೆದುಹಾಕುತ್ತೇನೆ. ಇಷ್ಟೂ ದಿನ ನೀನು ಏನು ಓದುತ್ತಿದ್ದೀಯಾ?" ಎಂದು ಗದರಿಸುತ್ತಾ ಸತತವಾಗಿ ಹೊಡೆದಿದ್ದಾನೆ.
ಶಿಕ್ಷಕ ಕಳೆದ ಕೆಲವು ದಿನಗಳಿಂದ ಯಾವುದೇ ಕಾರಣವಿಲ್ಲದೆ ತನ್ನನ್ನು ಪೀಡಿಸುತ್ತಿದ್ದ ಎಂದು ನೊಂದ ವಿದ್ಯಾರ್ಥಿ ತಂದೆಯ ಬಳಿ ಹೇಳಿಕೊಂಡಿದ್ದಾನೆ. ಪ್ರಸ್ತುತ ಬಾಲಕ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದು, ಆಂತರಿಕ ಗಾಯಗಳಿಂದ ಬಳಲುತ್ತಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಕಾಲೇಜಿನ ಪ್ರಿನ್ಸಿಪಾಲ್ ಅಮಿತ್ ಕುಮಾರ್ ಅವರಿಗೆ ದೂರು ನೀಡಿದ್ದು, ಬಳಿಕ ಹಸ್ತಿನಾಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಿನ್ಸಿಪಾಲ್ ಅಮಿತ್ ಕುಮಾರ್, ದೂರು ಬಂದಿದ್ದು ತನಿಖೆ ನಡೆಯುತ್ತಿದೆ, ವರದಿ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಮವಾನಾ ಸಿಒ ಪಂಕಜ್ ಲವಾನಿಯಾ ತಿಳಿಸಿದ್ದಾರೆ. ಸಿಎಸ್ಟಿವಿ ದೃಶ್ಯಾವಳಿ ವೈರಲ್ ಆದ ಬೆನ್ನಲ್ಲೇ ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ