Publish Date: Wed, 20 Apr 2016 (15:00 IST)
Updated Date: Wed, 20 Apr 2016 (15:05 IST)
ಉತ್ತರಖಾಂಡದ ಹೈಕೋರ್ಟ್ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ರಾಷ್ಟ್ರಪತಿಗಳ ನಿರ್ಧಾರ ಕೂಡ ನ್ಯಾಯಾಂಗ ಪುನರ್ವಿಮರ್ಶೆಗಿಂತ ಮೇಲಲ್ಲ ಎಂದು ಹೇಳಿದೆ. ಉತ್ತರಾಖಂಡದಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಿಕೆ ಕುರಿತು ವಿಚಾರಣೆ ಸಂದರ್ಭದಲ್ಲಿ ಕೇಂದ್ರಸರ್ಕಾರವು ರಾಷ್ಟ್ರಪತಿಗಳ ಅನುಮತಿಯನ್ನು ಕೋರ್ಟ್ ಪ್ರಶ್ನಿಸುವಂತಿಲ್ಲ ಎಂದು ಹೇಳಿದಾಗ ನ್ಯಾಯಾಧೀಶರು ಕೆರಳಿ ಕೆಂಡವಾದರು.
ರಾಜನ ನಿರ್ಧಾರವನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಲಾಗದೆಂಬ ಕಾನೂನಿಲ್ಲ. ಇದು ನಮ್ಮ ಸಂವಿಧಾನದ ಸತ್ವವಾಗಿದೆ. ರಾಷ್ಟ್ರಪತಿ ನಿರ್ಧಾರ ಕೂಡ ಕೆಲವು ಬಾರಿ ತಪ್ಪಾಗಬಹುದು. ಪ್ರತಿಯೊಂದು ನ್ಯಾಯಾಂಗ ವಿಮರ್ಶೆಗೆ ಒಳಪಡಬೇಕು. ನೀವು ಎಷ್ಟೇ ದೊಡ್ಡವರಾಗಿದ್ದರೂ ಕಾನೂನು ನಿಮಗಿಂತ ಮೇಲಿರುತ್ತದೆ ಎಂದು ಹೈಕೋರ್ಟ್ ತಿಳಿಸಿತು.
ರಾಜ್ಯಪಾಲರು ಮಾರ್ಚ್ 25ರ ವರದಿಯಲ್ಲಿ 28ರಂದು ಬಲಾಬಲ ಪರೀಕ್ಷೆಗೆ ಕಾಯುತ್ತಿರುವುದಾಗಿ ಸ್ಪಷ್ಟವಾಗಿ ಹೇಳಿದ್ದರೆಂದು ಕೋರ್ಟ್ ಗಮನಸೆಳೆಯಿತು.
ರಾಷ್ಟ್ರಪತಿಗಳ ಆಳ್ವಿಕೆಯನ್ನು ಹೇರುವ ಮೂಲಕ ಆಯ್ಕೆಯಾದ ಸರ್ಕಾರದ ಅಧಿಕಾರವನ್ನು ಕೇಂದ್ರ ಕಸಿದುಕೊಂಡಿದೆ ಎಂದು ಹೈಕೋರ್ಟ್ ಮಂಗಳವಾರ ತಿಳಿಸಿತ್ತು.
ಕುದುರೆ ವ್ಯಾಪಾರ ಮತ್ತು ಭ್ರಷ್ಟಾಚಾರದ ಆರೋಪಗಳ ನಡುವೆಯೂ ಬಹುಮತ ಪರೀಕ್ಷೆಯ ಸಂವಿಧಾನಿಕ ವಿಧಾನವು ಬಲಾಬಲ ಪರೀಕ್ಷೆಯಾಗಿದೆ ಎಂದು ಕೋರ್ಟ್ ವಿಭಾಗೀಯ ಪೀಠವು ಪುನರಾವರ್ತಿತವಾಗಿ ಹೇಳಿತ್ತು.