ಖ್ಯಾತ ಶೆಹನಾಯಿ ವಾದಕ ಬಿಸ್ಮಿಲ್ಲಾಖಾನ್ ಅವರ ಶೆಹನಾಯಿ ಕದ್ದ ಕಳ್ಳನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಆದರೆ ವೇದನೀಯ ವಿಷಯವೆಂದರೆ ದಿವಂಗತರ ಮೊಮ್ಮಗನೇ ಇದನ್ನು ಕಳ್ಳತನ ಮಾಡಿ ಮಾರಿಕೊಂಡಿದ್ದು ಮತ್ತೀಗ ಪೊಲೀಸರ ವಶದಲ್ಲಿದ್ದಾನೆ.
ಕಳ್ಳತನ ಆರೋಪದಲ್ಲಿ ಶ್ರೇಷ್ಠ ಸಂಗೀತಕಾರನ ಮೊಮ್ಮಗ ನಝರ್ ಹುಸೇನ್ ಸೇರಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
ತನ್ನ ಮನೆಯಿಂದ ಅಜ್ಜನ ಬೆಳ್ಳಿಯ ಶೆಹನಾಯಿಗಳನ್ನು ಕದ್ದಿದ್ದ ನಝರ್ ಅದನ್ನು ಸ್ಥಳೀಯ ಚಿನ್ನಾಭರಣ ವ್ಯಾಪಾರಿ ಶಂಕರ್ ಸೇಠ್ ಅವರಿಗೆ ಕೇವಲ 17,000ರೂಪಾಯಿಗಳಿಗೆ ಮಾರಿದ್ದ. ಹೀಗಾಗಿ ಸೇಠ್ ಮತ್ತು ಅವರ ಪುತ್ರ ಸುಜಿತ್ ಕೂಡ ಪೊಲೀಸ್ ವಶದಲ್ಲಿದ್ದಾರೆ.
ಬಿಸ್ಮಿಲ್ಲಾ ಖಾನ್ ಅವರ ಪುತ್ರ ಕಜೀಮ್ ಹುಸೇನ್ ನಿವಾಸದಿಂದ ಡಿಸೆಂಬರ್ 4 ರಂದು ಒಟ್ಟು 5 ಬೆಳ್ಳಿ ಮತ್ತು ಒಂದು ಮರದ ಶೆಹನಾಯಿಗಳು ನಾಪತ್ತೆಯಾಗಿದ್ದವು. ಇವುಗಳಲ್ಲಿ ಮೂರು ಶಹನಾಯಿಗಳನ್ನು ಚಿನ್ನದ ಅಂಗಡಿಯಲ್ಲಿ ಕರಗಿಸಲಾಗಿದೆ. ಕರಗಿಸಿದ ಬೆಳ್ಳಿ ಸಮೇತ ಕದ್ದ ಎಲ್ಲ ಶೆಹನಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಣದ ಅಗತ್ಯ ಇದ್ದುದರಿಂದ ಶೆಹನಾಯಿಗಳನ್ನು ಕದ್ದು ಮಾರಿರುವುದಾಗಿ ಪ್ರಮುಖ ಆರೋಪಿ ಒಪ್ಪಿಕೊಂಡಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.