ನಿಮಗೆ ಬಿಹಾರ್ ಪಿಯುಸಿ ಫಲಿತಾಂಶ ಸೃಷ್ಟಿಸಿದ ವಿವಾದದ ಬಗ್ಗೆ ಗೊತ್ತಿರಬಹುದು. ಪರೀಕ್ಷೆಯಲ್ಲಿ ಟಾಪರ್ಗಳಾದವರು ಸರಳ ಪ್ರಶ್ನೆಗೆ ಉತ್ತರಿಸಲು ಅಸರ್ಥರಾದಾಗ ದೊಡ್ಡ ಅಕ್ರಮ ಬೆಳಕಿಗೆ ಬಂದಿತ್ತು. ಟಾಪರ್ಗಳಿಗೆ ಮರು ಪರೀಕ್ಷೆಯನ್ನು ಸಹ ನಡೆಸಲಾಗಿತ್ತು. ಅದರಲ್ಲಿ ಕೆಲವರು ಅನುತ್ತೀರ್ಣರಾಗಿದ್ದು, ಕಲಾ ವಿಭಾಗದಲ್ಲಿ ಟಾಪರ್ ಎನಿಸಿಕೊಂಡಿದ್ದ, ಸಂಪೂರ್ಣ ಪ್ರಕರಣ ಹೊರ ಬರಲು ಕಾರಣವಾಗಿದ್ದ ರುಬಿ ರೈ ಅನಾರೋಗ್ಯದ ಕಾರಣ ನೀಡಿ ಮರುಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಳು. ಕೊನೆಗೂ ಪರೀಕ್ಷೆಗೆ ಹಾಜರಾದ ಅವಳು ಬರೆದ ಉತ್ತರ ಪತ್ರಿಕೆ ಸಂಪೂರ್ಣ ರಾಜ್ಯಕ್ಕೆ ಆಘಾತವನ್ನು ತಂದೊಡ್ಡಿದೆ. ಆತಂಕಕ್ಕೆ ದೂಡಿದೆ.
ಶನಿವಾರ ಪರೀಕ್ಷೆಯನ್ನೆದುರಿಸಿದ ರುಬಿಗೆ ಕವಿ, ಸಂತ ತುಳಸಿದಾಸ್ ಅವರ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗಿತ್ತು. ಅದಕ್ಕೆ ಅವಳು ಬರೆದಿದ್ದು ಒಂದು ಸಾಲಿನ ಉತ್ತರ. 'ತುಳಸಿದಾಸ್ ಜಿ ನಮಸ್ಕಾರ'.
ಮರುಪರೀಕ್ಷೆ ಆಕೆ ನಡೆಸಿದ ಅಕ್ರಮ ಸಾಬೀತಾಗಿದ್ದು ವಿಶೇಷ ತನಿಖಾ ದಳದಿಂದ ಬಂಧನಕ್ಕೊಳಗಾಗಿದ್ದಾಳೆ.
ಬಿಹಾರದ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಸಂಪೂರ್ಣ ದೇಶದಾದ್ಯಂತ ಸುದ್ದಿಯಾಗಿತ್ತು.ಆದರೆ ಅದು ಪ್ರಖ್ಯಾತಿಯಲ್ಲ. ಕುಖ್ಯಾತಿ. ಟಾಪರ್ ವಿದ್ಯಾರ್ಥಿನಿಯೊರ್ವಳು ರಾಜ್ಯಶಾಸ್ತ್ರ ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸಲು ಅಸಮರ್ಥಳಾದಾಗ ಪರೀಕ್ಷೆಯಲ್ಲಿ ಭಾರಿ ಅಕ್ರಮವಾಗಿದೆ ಎಂಬುದು ಹೊರಬಿದ್ದಿತ್ತು.
ರಾಜ್ಯಶಾಸ್ತ್ರ ಎಂದರೇನು ಎಂದು ಪ್ರಶ್ನಿಸಲಾಗಿ ರುಬಿ ಪೊಲಿಟಿಕಲ್ ಸೈನ್ಸ್ನ್ನು ಪ್ರೊಡಿಕಲ್ ಸೈನ್ಸ್ ಎಂದು ಉಚ್ಛರಿಸಿದ್ದಳಲ್ಲದೇ ಇದು ಅಡುಗೆ ಮಾಡುವುದನ್ನು ಕಲಿಸುವ ವಿಷಯ ಎಂದಿದ್ದಳು. ಅವಳು ಈ ಉತ್ತರ ನೀಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿತ್ತು. ಅವಳು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಎನ್ನಿಸಿಕೊಂಡಿದ್ದು ಅದರಲ್ಲೂ ರಾಜ್ಯಶಾಸ್ತ್ರದಲ್ಲಿ ಗರಿಷ್ಠ ಅಂಕ ಗಳಿಸಿದ್ದಳು.
ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಅವಳು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ವಿಫಲಳಾಗಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಆಕೆ ಪರೀಕ್ಷೆಗಾಗಿ ಎರಡು ವರ್ಷದಿಂದ ಸಿದ್ಧತೆ ನಡೆಸಿದ್ದೆ. ಆದರೆ ಈಗ ಪರೀಕ್ಷೆ ಮುಗಿದು ಮೂರು ತಿಂಗಳಾಗಿರುವುದರಿಂದ ಎಲ್ಲ ಮರೆತು ಹೋಗಿದೆ ಎನ್ನುತ್ತಿದ್ದಾಳೆ.
ವರದಿಗಳ ಪ್ರಕಾರ ಬಿಹಾರದಲ್ಲಿ ನಡೆಯುತ್ತಿರುವ ದಂಧೆ 'ರಾಕೆಟ್ ರನ್' ಮೂಲಕ ಆಕೆ ಟಾಪರ್ ಎನ್ನಿಸಿಕೊಂಡಿದ್ದಾಳೆ. ಅಂದರೆ 15 ಲಕ್ಷ ನೀಡಿ ಟಾಪರ್ ಪಟ್ಟಿಯಲ್ಲಿ ಹೆಸರು ಗಳಿಸುವುದು.
ಈ ಎಲ್ಲ ಬೆಳವಣಿಗೆಗಳು ಬಿಹಾರದಲ್ಲಿನ ಶೈಕ್ಷಣಿಕ ವ್ಯವಸ್ಥೆಯ ದುರವಸ್ಥೆಯನ್ನು ಬಟಾಬಯಲುಗೊಳಿಸಿವೆ.