Publish Date: Fri, 21 Jul 2017 (14:32 IST)
Updated Date: Fri, 21 Jul 2017 (14:35 IST)
ತೆಲಂಗಾಣ:ತೆಲಂಗಾಣದ ಸರ್ಕಾರಿ ಶಾಲೆಯ ಶಿಕ್ಷಕರು ತಲೆಗೆ ಹೆಲ್ಮೆಟ್ ಧರಿಸಿ ಪಾಠ ಮಾಡುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.
ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಶಂಕರ ಪೀಠ ಸರ್ಕಾರಿ ಹೈಸ್ಕೂಲ್ ನಲ್ಲಿ ಶಾಲೆಯ ಮೇಲ್ಚಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಇದರಿಂದಾಗಿ ಮಳೆಗಾಲದಲ್ಲಿ ನೀರು ಸೋರಿ ಶಾಲೆಯ ಕೊಠಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಗಳ ಮೈಮೇಲೆ, ಶಿಕ್ಷಕರ ಮೇಲೆ ನೀರೇಲ್ಲ ಸೂರುತ್ತಿರುತ್ತದೆ. ಲೀಕಾಗಿರುವ ಸೀಲಿಂಗ್ ಕೆಳಗೇ ಕುಳಿತು ವಿದ್ಯಾರ್ಥಿಗಳು ಪಾಠ ಕೇಳಬೇಕಾದ ದುಸ್ಥಿತಿಯಾದರೆ ಶಿಕ್ಷಕರಿಗೂ ಇಂತ ಸ್ಥಿತಿಯಲ್ಲೇ ಪಾಠಮಾಡಬೇಕಾದ ದುರಾವಸ್ಥೆ.
ಕಳೆದ ಮೂರು ವರ್ಷಗಳಿಂದಲೂ ಈ ಶಾಲೆಯಲ್ಲಿ ಇದೇ ಪರಿಸ್ಥಿತಿಯಿದ್ದು, ಈ ಬಗ್ಗೆ ಶಿಕ್ಷಕರು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲ ಬಂತೆಂದರೆ ವಿದ್ಯಾರ್ಥಿಗಳು, ಶಿಕ್ಷಕರು ಪ್ರತಿಬಾರಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದರೆಂದ ಬೇಸತ್ತ ಶಾಲಾ ಶಿಕ್ಷಕರು ಹೆಲ್ಮೆಟ್ ಧರಿಸಿ ಪಾಠ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.