ಸದಾ ರಾಜಕೀಯ ವೈರಿಗಳ ಕಾಲೆಳೆಯುವ ಮತ್ತು ಹೆಚ್ಚಿನ ಸಂದರ್ಭದಲ್ಲಿ ತಮ್ಮದೇ ಪಕ್ಷದ ಸಹೋದ್ಯೋಗಿಗಳಿಗೆ ಮುಜುಗರವನ್ನುಂಟು ಮಾಡುವ ಬಿಜೆಪಿಯ ಕಲಹಪ್ರೇರಕ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಏನೇ ಆದರೂ ತಾನು ತೆಪ್ಪಗಿರುವುದಿಲ್ಲ. ಕನಿಷ್ಠ ಪಕ್ಷ ಸಾಮಾಜಿಕ ಜಾಲತಾಣದಲ್ಲಾದರೂ ಶಬ್ಧ ಮಾಡುತ್ತೇನೆ ಎಂಬ ಸೂಚನೆ ನೀಡಿದ್ದಾರೆ.
ಶಕುನಿ ನಡೆಯನ್ನು ಇಡುವ ಕೊಂಗಿಗಳು ನನಗೆ ಪಕ್ಷ ಖಡಕ್ ಆದೇಶ ನೀಡಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ರಬ್ಬಿಶ್! ಸಾಮಾಜಿಕ ಜಾಲತಾಣ ಮತ್ತು ಪಿಟಿ'ಸ್ ಇರಬೇಕಾದರೆ ಎಮ್ಎಸ್ಎಮ್ಗೆ ಯಾರು ಕ್ಯಾರೆನ್ನುತ್ತಾರೆ ಎಂದು ಸ್ವಾಮಿ ಗುರುವಾರ ಟ್ವೀಟ್ ಮಾಡಿದ್ದಾರೆ.
ಸ್ವಾಮಿ ಅವರ ಟ್ವಿಟರ್ ಶಬ್ದಕೋಶದ ಪ್ರಕಾರ ಕೊಂಗಿ ಎಂದರೆ ಕಾಂಗ್ರೆಸ್ ನಾಯಕರು , ಪಿಟಿ ಎಂದರೆ ಪೆಟ್ರಿಯಾಟ್ರಿಕ್ ಟ್ವಿಪಲ್, ಮತ್ತು ಎಮ್ಎಸ್ಎಮ್ ಮುಖ್ಯವಾಹಿನಿಯ ಮಾಧ್ಯಮ.
ಕೊನೆಗೂ ಬಿಜೆಪಿ ಸ್ವಾಮಿ ಅವರಿಗೆ ವಿಪ್ ಜಾರಿ ಮಾಡಿದೆ ಎಂಬ ಅನಧಿಕೃತ ವರದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸ್ವಾಮಿ ಈರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಎರಡು ತಿಂಗಳ ಹಿಂದೆ ಬಿಜೆಪಿ ನಾಯಕ ರಿಸರ್ವ್ ಬ್ಯಾಂಕ್ ಗನರ್ನರ್ ರಘುರಾಮ್ ರಾಜನ್, ಆರ್ಥಿಕ ವ್ಯವಹಾರಗಳ ತಜ್ಞ ಶಕ್ತಿಕಾಂತ ದಾಸ್ ಮತ್ತು ಇತರ ಸರ್ಕಾರಿ ಅಧಿಕಾರಿಗಳ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿಯಿಂದ ಕಟುವಾಗಿ ಖಂಡಿಸಲ್ಪಟ್ಟಿದ್ದರು.