Publish Date: Fri, 14 May 2021 (09:13 IST)
Updated Date: Fri, 14 May 2021 (09:18 IST)
ಬೆಂಗಳೂರು: ಕೊರೋನಾ ಹಲವರ ಜೀವನ ಕಸಿದುಕೊಂಡರೆ ವಿದ್ಯಾರ್ಥಿಗಳ ಭವಿಷ್ಯಕ್ಕೇ ಮಾರಕವಾಗಿದೆ. ಈಗಾಗಲೇ ಆನ್ ಲೈನ್ ಕ್ಲಾಸ್ ನಲ್ಲಿ ಪಾಠ ಮುಗಿಸಿ ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಕೊರೋನಾ ಅಲೆ ಶಾಕ್ ನೀಡಿದೆ.
ರಾಜ್ಯ ಸರ್ಕಾರ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದರಿಂದಾಗಿ ಈಗಾಗಲೇ ಪರೀಕ್ಷೆಗೆ ಓದಿ ಮುಗಿಸಿದ ವಿದ್ಯಾರ್ಥಿಗಳ ಕತೆ ಅತಂತ್ರವಾಗಿದೆ.
ಮುಂದೆ ಯಾವಾಗ ಪರೀಕ್ಷೆ ನಡೆಯುತ್ತದೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಪರೀಕ್ಷೆ ದಿನಾಂಕ ಘೋಷಿಸಿದರೆ ಈಗ ಓದಿದ್ದು, ತರಗತಿಯಲ್ಲಿ ಹೇಳಿದ ವಿಚಾರಗಳು ತಲೆಯಲ್ಲಿರುತ್ತದೋ ಇಲ್ಲವೋ ಗೊತ್ತಿಲ್ಲ. ಇದು ಅಂಕದ ಮೇಲೆ ಪರಿಣಾಮ ಬೀರಿದರೆ ಭವಿಷ್ಯದ ಬಗ್ಗೆ ಏನೇನೋ ಕನಸು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳಿಗೆ ಈ ನಿರ್ಣಾಯಕ ಘಟ್ಟದಲ್ಲಿ ತುಂಬಾ ತೊಂದರೆಯಾಗಲಿದೆ.