Publish Date: Tue, 16 Aug 2016 (16:59 IST)
Updated Date: Tue, 16 Aug 2016 (17:09 IST)
ನನ್ನ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಜೆಡಿಎಸ್ನಿಂದ ಅಮಾನತಾಗಿರುವ ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಆರೋಪಿಸಿದ್ದಾರೆ.
ಸ್ವಕ್ಷೇತ್ರ ಮಾಗಡಿಯಲ್ಲಿ ಮಾತನ್ನಾಡುತ್ತಿದ್ದ ಅವರು, ಸದಾ ಕುಮಾರಸ್ವಾಮಿ ಅವರ ಜತೆ ಇರುವ ಹಕ್ಕಬುಕ್ಕರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಮುಂದಿನ ಬಾರಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕೆ ನಾಲ್ಕು ಸ್ಥಾನ ಸಿಗತ್ತೆ. ಎರಡು ಸ್ಥಾನಗಳು ಕುಮಾರಸ್ವಾಮಿ ಮತ್ತು. ಹೆಚ್.ಡಿ.ರೇವಣ್ಣ ಅವರ ಪಾಲಾದರೆ, ಮತ್ತೆರಡು ಸ್ಥಾನಗಳು ಪಕ್ಷದಲ್ಲಿ ಹಿರಿಯರಾಗಿರುವ ಚೆಲುವರಾಯಸ್ವಾಮಿ ಮತ್ತು ನನ್ನ ಪಾಲಾಗುತ್ತವೆ. ನಮ್ಮಿಬ್ಬರನ್ನು ಪಕ್ಷದಿಂದ ಹೊರಹಾಕಿದರೆ ಸಚಿವ ಸ್ಥಾನವನ್ನು ದಕ್ಕಿಸಿಕೊಳ್ಳಬಹುದು ಎಂದು ನನ್ನನ್ನು ಪಕ್ಷದಿಂದ ಹೊರಕುವ ಪಿತೂರಿ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯನವರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದು ನಿಜ ಎಂದು ಅವರು ಒಪ್ಪಿಕೊಂಡಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವ ಮೂಲಕ ಬಂಡಾಯದ ಕಹಳೆ ಮೊಳಗಿಸಿದ 8 ಶಾಸಕರನ್ನು ಜೆಡಿಎಸ್ ಅಮಾನತುಗೊಳಿಸಿತ್ತು.
ಶಾಸಕರಾದ ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ, ಹೆಚ್.ಸಿ ಬಾಲಕೃಷ್ಣ, ಕೆ. ಗೋಪಾಲಯ್ಯ, ಭೀಮಾ ನಾಯ್ಕ್ ಹಾಗೂ ರಮೇಶ್ ಬಂಡಿಸಿದ್ದೇಗೌಡ ಮತ್ತು ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ ಮೂರ್ತಿ ಅವರು ಪಕ್ಷದಿದ್ದ ಅಮಾನತು ಗೊಂಡಿದ್ದರು.