15 ರೂಪಾಯಿ ಸಾಲ ಹಿಂತಿರುಗಿಸಿಲ್ಲವೆಂದು ದಂಪತಿಗಳ ಕೊಲೆ ನಡೆಸಿದ ಹೇಯ ಸುದ್ದಿ ಮನದಂಗಳದಿಂದ ಮರೆಯಾಗುವ ಮುನ್ನವೇ ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ನಡೆದಿದೆ. 100 ರೂಪಾಯಿ ಲಂಚ ನೀಡಲು ನಿರಾಕರಿಸಿದ್ದಕ್ಕೆ ಕಾರ್ಮಿಕರಿಬ್ಬರನ್ನು ಪೊಲೀಸರು ಕೊಂದಿದ್ದಾರೆ.
ಅವರಿಬ್ಬರ ಶವ ಹತ್ತಿರದ ಕೊಳವೊಂದರಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಘಟನೆಯಿಂದ ಉದ್ರಿಕ್ತರಾದ ಘಿರೋರ್ ಗ್ರಾಮಸ್ಥರು ಮತ್ತು ಮೃತ ಕುಟುಂಬದವರು ರಸ್ತೆಯನ್ನು ತಡೆದು ಪ್ರತಿಭಟಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಕೂಡ ಹಲ್ಲೆ ನಡೆಸಲಾಯಿತು.
ಇಬ್ಬರು ಹೋಮ್ ಗಾರ್ಡ್ ಸೇರಿದಂತೆ 6 ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ ಎಂದು ಮೈನ್ಪುರಿ ಪೊಲೀಸ್ ಅಧೀಕ್ಷಕ ದೇವರಂಜನ್ ವರ್ಮಾ ತಿಳಿಸಿದ್ದಾರೆ.
ದೂರಿನ ಪ್ರಕಾರ ನಾಲ್ಕು ಜನ ಕಾರ್ಮಿಕರು ಇಟ್ಟಿಗೆ ತುಂಬಿಕೊಂಡು ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದರು.ಘಿರೋರ್ ಪೊಲೀಸ್ ಠಾಣಾ ವ್ಯಾಪ್ತಿ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಅನರನ್ನು ತಡೆದು100 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟರು. ಆದರೆ ಟ್ರಕ್ ಚಾಲಕ ಲಂಚ ನೀಡಲು ನಿರಾಕರಿಸಿದ್ದಾನೆ. ಹೀಗಾಗಿ ಎರಡು ಕಡೆಯವರಲ್ಲಿ ವಾಗ್ದಾದ ಪ್ರಾರಂಭವಾಗಿದೆ. ನಾಲ್ಕು ಜನರಲ್ಲಿ ಇಬ್ಬರು ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದು ಮತ್ತಿಬ್ಬರನ್ನು ಪೊಲೀಸರು ಮಾರಣಾಂತಿಕವಾಗಿ ಥಳಿಸಿದ್ದಾರೆ. ಸುಮಾರು 10 ಗಂಟೆ ಸುಮಾರಿಗೆ ಅವರಿಬ್ಬರ ಶವ ಸಮೀಪದ ಕೊಳವೊಂದರಲ್ಲಿ ಕಂಡು ಬಂದಿದ್ದು ಪೊಲೀಸರೇ ಅವರನ್ನು ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.