Publish Date: Tue, 02 Jan 2024 (10:48 IST)
Updated Date: Tue, 02 Jan 2024 (10:52 IST)
ಅಯೋಧ್ಯೆ: ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಳ್ಳಲಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲ ರಾಮನ ವಿಗ್ರಹಕ್ಕೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ಶಿಲ್ಪ ಬಹುತೇಕ ಆಯ್ಕೆಯಾಗಿದೆ ಎನ್ನಲಾಗಿದೆ.
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಶೀಘ್ರದಲ್ಲಿಯೇ ವಿಗ್ರಹ ಅಂತಿಮಗೊಳಿಸಲಿದ್ದಾರೆ. ಇದು ಅರುಣ್ ಯೋಗಿ ಕೆತ್ತಿದ ಮೂರನೇ ಶಿಲ್ಪ. ಇದಕ್ಕೆ ಮೊದಲು ದಿಲ್ಲಿಯಾ ಇಂಡಿಯಾ ಗೇಟ್ ಬಳಿ ಸ್ಥಾಪಿತವಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಮತ್ತು ಕೇದಾರನಾಥ ದೇವಾಲಯದಲ್ಲಿರುವ ಶ್ರೀ ಶಂಕರರ ಪ್ರತಿಮೆಯನ್ನು ಅರುಣ್ ಕೆತ್ತಿದ್ದರು.
ಇದೀಗ ರಾಮಲಲ್ಲಾನ ಪ್ರತಿಮೆ ಅರುಣ್ ಯೋಗಿ ನಿರ್ಮಿಸಿದ್ದೇ ಆಯ್ಕೆಯಾದರೆ ಕರ್ನಾಟಕಕ್ಕೇ ಹೆಗ್ಗಳಿಕೆಯಾಗಲಿದೆ. ಬಾಲ ರಾಮನ ರೂಪದಲ್ಲಿರುವ ವಿಗ್ರಹ ಬಹುತೇಕ ಅಂತಿಮವಾಗಿದೆ.
ಇನ್ನು ತಮ್ಮ ಮನೆ ಮಗ ನಿರ್ಮಿಸಿದ ವಿಗ್ರಹವೇ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಆಯ್ಕೆಯಾಗುತ್ತಿದೆ ಎಂಬ ಸುದ್ದಿ ಅವರ ಕುಟುಂಬಸ್ಥರ ಖುಷಿಗೆ ಕಾರಣವಾಗಿದೆ.