Publish Date: Thu, 24 Sep 2015 (14:03 IST)
Updated Date: Thu, 24 Sep 2015 (14:04 IST)
ತುರ್ತುಪರಿಸ್ಥಿತಿಗೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎನ್ನುವ ಮಾಜಿ ಗುಪ್ತಚರ ಸಂಸ್ಥೆ ಅಧಿಕಾರಿ ಟಿ.ವಿ.ರಾಜೇಶ್ವರ್ ಹೇಳಿಕೆಯನ್ನು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಆತ್ಮಿಯರಾಗಿದ್ದ ಆರ್.ಕೆ.ಧವನ್ ತಳ್ಳಿಹಾಕಿದ್ದಾರೆ.
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಬೆಂಬಲ ಸೂಚಿಸಿತ್ತು ಅಥವಾ ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಜನಸಂಘ ಪಕ್ಷವನ್ನು ಮರೆತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿತ್ತು ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಗುಪ್ತಚರ ದಳದ ಮುಖ್ಯಸ್ಥ ರಾಜೇಶ್ವರ್ ಬಿಡುಗಡೆಗೊಳಿಸಿದ ದಿ ಕ್ರುಶಿಯಲ್ ಇಯರ್ಸ್ ಎನ್ನುವ ಹೊಸ ಪುಸ್ತಕದಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ಇಂದಿರಾ ಅವರಿಗೆ ಬೆಂಬಲ ಸೂಚಿಸಿತ್ತು ಎನ್ನುವ ಹೇಳಿಕೆಗೆ ಧವನ್ ಅಸಮಧಾನ ವ್ಯಕ್ತಪಡಿಸಿ, ಇದೊಂದು ಸ್ವ-ವೈಭವೀಕರಣ ಎಂದು ಲೇವಡಿ ಮಾಡಿದ್ದಾರೆ.
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತೆಗೆದುಕೊಂಡ ಹಲವು ಕ್ರಮಗಳಿಗೆ ಆರೆಸ್ಸೆಸ್ ಬೆಂಬಲ ಸೂಚಿಸಿತ್ತಲ್ಲದೇ ಸಂಘದ ಮುಖ್ಯಸ್ಥರಾಗಿದ್ದ ಬಾಳಾಸಾಹೇಬ್ ದಿಯೋರಸ್ ಇಂದಿರಾ ಗಾಂಧಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎಂದು ರಾಜೇಶ್ವರ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಆರೆಸ್ಸೆಸ್ ಮುಖ್ಯಸ್ಥ ದಿಯೋರಸ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಲು ಬಯಸಿದ್ದರೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೇಶ್ವರ್ ನೀಡಿದ ಹೇಳಿಕೆಗಳಂತೆ ಯಾವುದು ನಡೆದಿಲ್ಲ. ಅವರು ಯಾಕೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುವುದು ನನಗೆ ಅಶ್ಚರ್ಯ ತಂದಿದೆ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಆರ್.ಕೆ.ಧವನ್ ಹೇಳಿದ್ದಾರೆ.