Publish Date: Fri, 03 Apr 2026 (11:19 IST)
Updated Date: Fri, 03 Apr 2026 (11:34 IST)
ಬಾಗಲಕೋಟೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಷ್ಟು ಲಜ್ಜೆಗೇಡಿ ಸರ್ಕಾರವನ್ನು ನಾವು ಎಂದೂ ನೋಡಿರಲಿಲ್ಲ. ಸರ್ಕಾರದ ನೀತಿಗಳಿಂದ ಬೇಸತ್ತ ಮತದಾರ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಸಂಸದ ರಮೇಶ್ ಜಿಗಜಿಣಗಿ ಅವರು ಹೇಳಿದ್ದಾರೆ.
ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದ ವೀರಣ್ಣ ಚರಂತಿಮಠ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರು ಕ್ಷೇತ್ರಕ್ಕಾಗಿ ದುಡಿದಿದ್ದಾರೆ. ಈ ಬಾರಿಯೂ ಅವರನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ಕರ್ನಾಟಕದಲ್ಲಿ ಕಾಂಗೆಸ್ ಸರ್ಕಾರ ಬಂದು ಮೂರು ವರ್ಷ ಆಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ನಾನು 48 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಈ ಅವಧಿಯಲ್ಲಿ ಸಾಕಷ್ಟು ಸರ್ಕಾರಗಳನ್ನು ನೋಡಿದ್ದೇನೆ. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಆದರೆ ಇಷ್ಟು ಕೆಟ್ಟ ಮತ್ತು ಲಜ್ಜೆಗೇಡಿ ಸರ್ಕಾರ ಇರಲಿಲ್ಲ. ಯಾರೇ ಸಿಎಂ ಆದರೂ ರಾಜ್ಯದ ಅಭಿವೃದ್ಧಿ, ಹಿತಕ್ಕೆ ಆದ್ಯತೆ ನೀಡುತ್ತಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯವನ್ನೇ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿಗಳೂ ಉಚಿತ ಕೊಡುಗೆಗಳನ್ನು ನೀಡಿದ್ದಾರೆ. ಈ ಕಾಂಗ್ರೆಸ್ ಸರ್ಕಾರವೂ ಗ್ಯಾರಂಟಿ ನೀಡುತ್ತಿದೆ. ಪುಕ್ಕಟೆ ನೀಡುತ್ತಿದೆ. ನಾವು ಉಚಿತವಾಗಿ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿ, ಕಡೆಗಣಿಸಿ, ಕುಂಠಿತ ಮಾಡಿ ಪುಕ್ಕಟೆ ಕೊಡಬಾರದು. ಇದು ಪಾಪಗೇಡಿ ಕೆಲಸ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಳಗಾದರೆ ಮುಸ್ಲಿಮರ ಹೆಸರು ಹೇಳುತ್ತದೆ. ಮಧ್ಯಾಹ್ನ ದಲಿತರ ಹೆಸರು, ಸಂಜೆಯಾದರೆ ಹಿಂದುಳಿದ ವರ್ಗದ ಹೆಸರು ಹೇಳುತ್ತದೆ. ಆದರೆ ಈ ಮೂರೂ ಸಮುದಾಯಗಳಿಗೆ ಸರ್ಕಾರ ಮೋಸ ಮಾಡಿದೆ. ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲರ ಹಣವನ್ನು ಲೂಟಿ ಮಾಡಿ ಗ್ಯಾರಂಟಿಗಳಿಗೆ, ಬೇರೆ ರಾಜ್ಯದ ಚುನಾವಣೆಗಳಿಗೆ ಬಳಸಿದ್ದಾರೆ ಎಂದು ನುಡಿದರು.
ಕ್ಷೇತ್ರದ ಜನ ಸೂಕ್ಷ್ಮ ಇದ್ದಾರೆ. ಅವರು ಬುದ್ಧಿವಂತರಾಗಿದ್ದಾರೆ. ಈ ಹಿಂದಿಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಯಾರಿಗೆ ಮತ ಹಾಕಬೇಕು ಎಂಬುದನ್ನು ವಿವೇಚನೆಯಿಂದ ತೀರ್ಮಾನ ಮಾಡಲಿದ್ದಾರೆ. ವೀರಣ್ಣ ಚರಂತಿಮಠ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ಎಲ್ಲಾ ವಿಶ್ವಾಸ ಇದೆ ಎಂದರು.