ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅಗತ್ಯ ವಸ್ತುಗಳ ದರ ಏರಿಕೆ ಕುರಿತಂತೆ ಲೋಕಸಭೆಯಲ್ಲಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರಕಾರ ಎರಡು ವರ್ಷಗಳ ಹಿಂದೆ ಅಗತ್ಯ ವಸ್ತುಗಳ ದರ ಇಳಿಕೆಗೊಳಿಸುವುದಾಗಿ ಭರವಸೆ ನೀಡಿತ್ತು. ದೇಶದ ಜನತೆಗೆ ನೀಡಿದ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.
ಕಳೆದ 2013ರಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದರ ಏರಿಕೆ ನಿಯಂತ್ರಿಸಲಾಗುವುದು. ಆದರೆ, ದರ ಏರಿಕೆ ನಿಯಂತ್ರಿಸುವ ಕುರಿತಂತೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ದೇಶದ ಮಾರುಕಟ್ಟೆಗಳಲ್ಲಿ ದ್ವಿದಳ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ದರಗಳು ಗಗನಕ್ಕೇರಿವೆ. ಜನಸಾಮಾನ್ಯರು ತೀವ್ರ ತೆರೆನಾದ ತೊಂದರೆ ಅನುಭವಿಸುತ್ತಿದ್ದಾರೆ. ನಿರಂತರ ದರ ಏರಿಕೆಯಿಂದ ಜನತೆ ಕಂಗಾಲಾಗಿದ್ದರೂ ಮೋದಿ ಸರಕಾರ ಮೌನಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಹಣದುಬ್ಬರ ದರವನ್ನು ಇಳಿಕೆಗೊಳಿಸುವುದಾಗಿ ಮೋದಿ ದೇಶದ ಜನತೆಗೆ ಭರವಸೆ ನೀಡಿದ್ದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಅವಧಿಯನ್ನು ಸಂಭ್ರಮಿಸಲಾಗುತ್ತಿದೆ. ಆದರೆ, ಹಣದುಬ್ಬರ ಇಳಿಕೆ ಕುರಿತಂತೆ ಮೋದಿ ಮಾತನಾಡಲು ಸಿದ್ದರಿಲ್ಲ ಎಂದು ಟಾಂಗ್ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ದ್ವಿದಳ ಧಾನ್ಯಗಳ ದರ ಯಾವಾಗ ಇಳಿಕೆಯಾಗುತ್ತದೆ ಎನ್ನುವುದನ್ನು ಮೋದಿ ಸರಕಾರ ಸದನಕ್ಕೆ ತಿಳಿಸಲಿ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.