ಇಂಧೋರ್: ರಾಜ ರಘುವಂಶಿ ಕೊಲೆಯಲ್ಲಿ ನನ್ನ ಅಣ್ಣ ಅಮಾಯಕ. ಆತ ಆ ದಿನ ಊರಲ್ಲೇ ಇದ್ದ. ಸೋನಂ ಜೊತೆ ಅವನಿಗೆ ಬೇರೆ ಯಾವ ಸಂಬಂಧವೂ ಇರಲಿಲ್ಲ. ಅವಳನ್ನು ಅಕ್ಕ ಎನ್ನುತ್ತಿದ್ದ ಎಂದು ಆರೋಪಿ ರಾಜ್ ಕುಶ್ವಾಹ್ ಸಹೋದರಿ ಹೇಳಿಕೆ ನೀಡಿದ್ದಾಳೆ.
ನನ್ನ ಅಣ್ಣ, ಸೋನಂ ಕುಟುಂಬದವರ ಫ್ಯಾಕ್ಟರಿಯಲ್ಲೇ ಕೆಲಸ ಮಾಡುತ್ತಿದ್ದ. ಸೋನಂ ಹೆಚ್ಚಾಗಿ ಬೆಳಿಗ್ಗೆ ಅವನಿಗೆ ಕರೆ ಮಾಡುತ್ತಿದ್ದಳು. ಆದರೆ ಯಾವತ್ತೂ ಕೆಲಸದ ವಿಷಯಕ್ಕೇ ಕಾಲ್ ಮಾಡುತ್ತಿದ್ದುದು. ಕೆಲವೊಮ್ಮೆ ಅವರ ಫೋನ್ ನಮ್ಮ ಬಳಿ ಅಟೆಂಡ್ ಮಾಡಲು ಹೇಳುತ್ತಿದ್ದ. ಅಕ್ಕನಿಗೆ ಈಗ ಬರುತ್ತೇನೆ ಎಂದು ಹೇಳು ಎನ್ನುತ್ತಿದ್ದ.
ಇದರ ಹೊರತಾಗಿ ಅವನು ಆಕೆ ಜೊತೆ ಹೆಚ್ಚು ಮಾತನಾಡುತ್ತಿರಲಿಲ್ಲ. ಮರ್ಡರ್ ಆದ ದಿನ ಅಂದರೆ ಮೇ 23 ರಂದು ಅಣ್ಣ ಊರಲ್ಲೇ ಇದ್ದ. ಸೋನಂ ಮದುವೆಗೂ ನಾವು ಯಾರೂ ಹೋಗಿರಲಿಲ್ಲ. ನಾವೆಲ್ಲಾ ಅದೇ ದಿನ ನಮ್ಮ ಹಳ್ಳಿಗೆ ಹೋಗಿದ್ದೆವು. ನಮ್ಮ ಅಣ್ಣ ಇಂಧೋರ್ ನಲ್ಲಿಯೇ ಇದ್ದ. ಆದರೆ ಬೇರೆ ಕೆಲಸ ಇದ್ದಿದ್ದರಿಂದ ಮದುವೆಗೆ ಹೋಗಿರಲಿಲ್ಲ ಎಂದು ಸಹೋದರಿ ಹೇಳಿಕೆ ನೀಡಿದ್ದಾಳೆ. ಈ ಕೊಲೆಗೂ ನನ್ನ ಅಣ್ಣನಿಗೂ ಸಂಬಂಧವಿಲ್ಲ. ಅವನು ಈ ಕೊಲೆ ಮಾಡಿಲ್ಲ. ಅವನು ಅಮಾಯಕ ಎಂದು ಸಹೋದರಿ ಹೇಳಿಕೊಂಡಿದ್ದಾಳೆ.