ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದು ಪ್ರಮುಖ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಸಮಾಜವಾದಿ, ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಪಕ್ಷಾಂತರ, ಅನಿರೀಕ್ಷಿತ ಬದಲಾವಣೆಗಳು, ವೈಮನಸ್ಸು, ಕುತಂತ್ರ ಕಾಣಿಸಿಕೊಳ್ಳುತ್ತಿದೆ.
'ಕೈ'ನ ಹಿರಿಯ ನಾಯಕಿ ರೀಟಾ ಬಹುಗುಣ್ ನಿರೀಕ್ಷೆಯಂತೆ ಗುರುವಾರ ಕಮಲದ ತೆಕ್ಕೆಗೆ ಜಾರಿದ್ದು ಕಾಂಗ್ರೆಸ್ಗೆ ಬಹುದೊಡ್ಡ ಹೊಡೆತ ನೀಡಿದಂತಾಗಿದೆ. ರೀಟಾ ಸೇರ್ಪಡೆಯಿಂದ ಉಬ್ಬಿರುವ ಬಿಜೆಪಿ ಬ್ರಾಹ್ಮಣ ವರ್ಗದ ವರ ಓಲೈಕೆಗೆ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ತಂತ್ರ ರೂಪಿಸುತ್ತಿದೆ. ರಾಹುಲ್ ನೇತೃತ್ವದಲ್ಲಿ ಯಾವುದೇ ಗುರಿ ಸಾಧಿಸಲು ಸಾಧ್ಯವಿಲ್ಲ. ಅದರಲ್ಲೂ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಘೋಷಿಸುವುದರಿಂದ ಯಾವುದೇ ಲಾಭವಿಲ್ಲ. ಪಕ್ಷವನ್ನು ಪ್ರಶಾಂತ್ ಕಿಶೋರ್ಗೆ ಗುತ್ತಿಗೆ ನೀಡಲಾಗಿದೆ ಎಂದು ಬಿಜೆಪಿಗೆ ಜಾರಿರುವ ರೀಟಾ ಟೀಕಿಸಿದ್ದಾರೆ.
ಪಕ್ಷದ ಪ್ರಭಾವಿ ನಾಯಕ, ನೆಹರು- ಗಾಂಧಿ ಕುಟುಂಬದ ಕುಡಿ ವರುಣ್ ಗಾಂಧಿ ಅವರ ಮೇಲೆ ಹನಿ ಟ್ರ್ಯಾಪ್ ಆರೋಪ ಕೇಳಿ ಬಂದಿರುವುದು ಪಕ್ಷಕ್ಕೆ ಇರಿಸುಮುರಿಸು ತಂದಿಟ್ಟಿದೆ. ಇದು ವಿರೋಧ ಪಕ್ಷಗಳ ಕುತಂತ್ರ ಎಂದು ಬಿಜೆಪಿ ತಮ್ಮ ನಾಯಕನ ಬೆನ್ನಿಗೆ ನಿಂತಿದೆ. ತಮ್ಮ ಮೇಲಿನ ಆರೋಪ 1 ಪ್ರತಿಶತದಷ್ಟು ಸತ್ಯವಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ವರುಣ್ ಘೋಷಿಸಿದ್ದಾರೆ.
ಇನ್ನೊಂದೆಡೆ ಸಮಾಜವಾದಿ ಪಕ್ಷದಲ್ಲಿ ಕುಟುಂಬ ಕಲಹ ಮುಂದುವರೆದಿದೆ. ತಮ್ಮ ಮತ್ತು ಮಗನ ನಡುವೆ ಸಿಕ್ಕಿ ಹಾಕಿಕೊಂಡಿರುವ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದಿಲ್ಲ. ಪುತ್ರ ಅಖಿಲೇಶ್ ಯಾದವ್ ಅವರನ್ನು ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದಿಲ್ಲ. ಚುನಾಯಿತ ಶಾಸಕರೇ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಮುಲಾಯಂ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಪ್ರಚಾರಕ್ಕಾಗಿ ನವೆಂಬರ್ 3 ರಿಂದ ಅಖಿಲೇಶ್ ಕೈಗೊಳ್ಳುತ್ತಿರುವ ವಿಕಾಸ ರಥಯಾತ್ರೆ ಭಂಗ ತರಲು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಹುನ್ನಾರ ನಡೆಸಿದ್ದರೆ, ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರನ್ನು ಕೆಳಗಿಳಿಸಿ ಅಖಿಲೇಶ್ ಯಾದವ್ ಅವರಿಗೆ ಜವಾಬ್ದಾರಿ ನೀಡಬೇಕೆಂಬ ಒತ್ತಾಯಗಳು ಸಹ ಪ್ರಾರಂಭವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.