Publish Date: Tue, 25 Aug 2026 (09:16 IST)
Updated Date: Tue, 25 Aug 2026 (09:19 IST)
ನವದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13 ರಂದು 18ನೇ BRICS ಶೃಂಗಸಭೆ ನಡೆಯಲಿದ್ದು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಶಿ ಜಿನ್ಪಿಂಗ್ ಸೇರಿದಂತೆ ಹಲವು ಜಾಗತಿಕ ನಾಯಕರು ರಾಜಧಾನಿಗೆ ಆಗಮಿಸಲಿದ್ದಾರೆ. ಆದರೆ, ಈ ಮಹತ್ವದ ಶೃಂಗಸಭೆಗೆ ಕೆಲವು ದಿನಗಳ ಮೊದಲು, ಅಂದರೆ ಸೆಪ್ಟೆಂಬರ್ 5 ರಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ.
ಇಂಡಿಯಾ ಗೇಟ್ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಈ ಮೆರವಣಿಗೆ ನಡೆಯಲಿದ್ದು, ಪ್ರಸ್ತುತ ಇದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರತಿಭಟನೆಯ ಹಿನ್ನೆಲೆ ಮತ್ತು ದಿನಾಂಕದ ಆಯ್ಕೆ
NEET ಪರೀಕ್ಷೆ ಅಕ್ರಮಗಳು ಮತ್ತು ವಿದ್ಯಾರ್ಥಿಗಳ ಹೋರಾಟಕ್ಕೆ ಸಂಬಂಧಿಸಿದಂತೆ ಜುಲೈ 25 ರಂದು ಕೇಂದ್ರ ಸರ್ಕಾರ ನೀಡಿ ಭರವಸೆಗಳನ್ನು ಈಡೇರಿಸಿಲ್ಲ ಎಂದು CJP ಆರೋಪಿಸಿದೆ.
CJP ವಾದ: ಜುಲೈ 25 ರಂದು ನೀಡಿದ್ದ ಭರವಸೆಗಳಿಗೆ ಸರಿಯಾಗಿ ಒಂದು ತಿಂಗಳು ಮುಗಿಯುತ್ತ ಬಂದರೂ ಸರ್ಕಾರ ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ಹಿಂಪಡೆಯುವುದು ಹಾಗೂ ನಷ್ಟ ಪರಿಹಾರ ನೀಡುವುದರಲ್ಲಿ ವಿಳಂಬ ಧೋರಣೆ ತಳೆದಿದೆ. ಹೀಗಾಗಿ ಶಿಕ್ಷಕರ ದಿನಾಚರಣೆಯಂದೇ (ಸೆಪ್ಟೆಂಬರ್ 5) ಪ್ರತಿಭಟನೆ ನಡೆಸುವುದು ತಮ್ಮ ಹಕ್ಕು ಎಂದು ಸಂಘಟನೆ ಹೇಳಿದೆ.
ಸಂತ್ರಸ್ತರ ನೇತೃತ್ವ: ಈ ಮೆರವಣಿಗೆಯ ನೇತೃತ್ವವನ್ನು ಪರೀಕ್ಷಾ ಅಕ್ರಮ ಹಾಗೂ ಪೊಲೀಸ್ ನೂಕಾಟದಿಂದ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳ ಕುಟುಂಬಸ್ಥರೇ ವಹಿಸಲಿದ್ದಾರೆ ಎಂದು CJP ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಬೆಂಬಲಿಗರಲ್ಲಿ ಎದ್ದಿರುವ ಪ್ರಶ್ನೆಗಳು
ಶೃಂಗಸಭೆಯ ಹೊಸ್ತಿಲಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ಬಿಜೆಪಿ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಭದ್ರತೆ ಮತ್ತು ಸಾರಿಗೆ ಸಂಚಾರ: ವಿದೇಶಿ ಗಣ್ಯರು ಆಗಮಿಸುವ ಸಮಯದಲ್ಲಿ ದೆಹಲಿಯಲ್ಲಿ ಬೃಹತ್ ಮೆರವಣಿಗೆ ನಡೆಸುವುದು ಭದ್ರತಾ ಸಂಸ್ಥೆಗಳಿಗೆ ಸವಾಲಾಗಲಿದ್ದು, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬುದು ವಿಮರ್ಶಕರ ವಾದ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಇಮೇಜ್: ಜಗತ್ತಿನ ಕಣ್ಣು ಭಾರತದ ಮೇಲಿರುವಾಗ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುವುದು ವಿದೇಶಿ ಮಾಧ್ಯಮಗಳ ಮುಂದೆ ದೇಶದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಸಮಯದ ಆಯ್ಕೆಯ ಕುರಿತು ಶಂಕೆ: BRICS ಸಮ್ಮೇಳನಕ್ಕೆ ಕೇವಲ ಒಂದು ವಾರ ಇರುವಾಗ ಈ ದಿನಾಂಕವನ್ನೇ ಆಯ್ಕೆ ಮಾಡಿಕೊಂಡಿರುವುದು ಉದ್ದೇಶಪೂರ್ವಕವೇ ಎನ್ನುವ ಚರ್ಚೆಯೂ ನಡೆಯುತ್ತಿದೆ.
CJP ಸ್ಪಷ್ಟನೆ
ಈ ಆಕ್ಷೇಪಣೆಗಳಿಗೆ ಉತ್ತರಿಸಿರುವ CJP ನಾಯಕರು, ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು. ಸರ್ಕಾರವೇ ತನ್ನ ಭರವಸೆಯಿಂದ ಹಿಂದೆ ಸರಿದು ಇಂತಹ ಸನ್ನಿವೇಶಕ್ಕೆ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. BRICS ನಂತಹ ಅಂತಾರಾಷ್ಟ್ರೀಯ ರಾಜತಾಂತ್ರಿಕ ಕಾರ್ಯಕ್ರಮದ ನಡುವೆ ದೇಶೀಯ ಯುವಜನತೆಯ ಪ್ರತಿಭಟನೆ ನಡೆದಿರುವುದು ರಾಜಕೀಯವಾಗಿ ಮತ್ತು ರಾಜತಾಂತ್ರಿಕವಾಗಿ ತೀವ್ರ ಕುತೂಹಲ ಮೂಡಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ