Publish Date: Tue, 17 May 2022 (08:09 IST)
Updated Date: Tue, 17 May 2022 (09:11 IST)
ಲಕ್ನೋ : ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಆಡಳಿತ ಮಂಡಳಿ) ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ನೀಡಿದ ಲಿಖಿತ ಆದೇಶದಂತೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಜ್ಞಾನವ್ಯಾಪಿ ಮಸೀದಿಯ ಆಡಳಿತ ಮಂಡಳಿಯ ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ಹಲವು ಮಹತ್ವದ ಬೆಳವಣಿಗೆಯ ನಡುವೆ ವಾರಣಾಸಿ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿದೆ. ಈಗಾಗಲೇ ಸಮೀಕ್ಷಾ ತಂಡವು ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿರುವ ಸ್ಥಳವನ್ನು ಬಂದ್ ಮಾಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಕಳೆದ ವಾರ, ಮುಸ್ಲಿಂ ಮುಖಂಡ ಮನವಿಯಂತೆ ಸಮೀಕ್ಷೆ ವಿರುದ್ಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ರವಾನಿಸಲು ಸುಪ್ರೀಂ ನಿರಾಕರಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಪರಿಗಣಿಸಲು ಒಪ್ಪಿಕೊಂಡಿತು.