ಮಲತಂದೆಯೊಬ್ಬ 6 ವರ್ಷದ ಪುಟ್ಟ ಮಗಳನ್ನು ನದಿಗೆಸೆದ ಹೇಯ ಘಟನೆ ಠಾಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ತುಳಸೀರಾಮ್ ಸೈನಿ(48) ಬಾಲಕಿಯ ತಾಯಿಯನ್ನು ಮದುವೆಯಾಗಿ ಲೋಕಮಾನ್ಯ ನಗರದಲ್ಲಿ ವಾಸವಾಗಿದ್ದ. ಬುಧವಾರ ಪತಿ ಪತ್ನಿ ನಡುವೆ ಜಗಳ ನಡೆದಿತ್ತು. ಮಗಳು ಏಕ್ತಾಳನ್ನು ಬೈಕ್ನಲ್ಲಿ ಕರೆದೊಯ್ದ ಆತ ಪತ್ನಿಯ ಮೇಲಿನ ಕೋಪಕ್ಕೆ ಆಕೆಯನ್ನು ಬದ್ಲಾಪುರದ ಬಳಿ ನದಿಗೆ ಎಸೆದು ಪರಾರಿಯಾಗಿದ್ದಾನೆ.
ಪುಟ್ಟ ಬಾಲಕಿ ನೀರಿನಲ್ಲಿದ್ದ ಗಿಡಗಳನ್ನು ಹಿಡಿದುಕೊಂಡು ಬೆಳಗಾಗುವವರೆಗೂ ಕಾದಿದ್ದಾಳೆ. ಆ ಸಮಯದಲ್ಲಿ ಭಾರಿ ಮಳೆ ಆಗುತ್ತಿದ್ದರೂ ಬಾಲಕಿ ಬದುಕುಳಿದಿದ್ದು ಮರುದಿನ ಆಕೆಯನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ದಳದವರನ್ನು ಕರೆದು ಆಕೆಯನ್ನು ರಕ್ಷಿಸಿದ್ದಾರೆ.
ರಾತ್ರಿ ಎಲ್ಲ ಸೊಳ್ಳೆ ಕಡಿತಕ್ಕೆ ಒಳಗಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತನ್ನ ಪತಿ ಮತ್ತು ಮಗಳು ಬುಧವಾರ ರಾತ್ರಿಯಿಂದ ಮನೆಗೆ ಹಿಂತಿರುಗಿರಲಿಲ್ಲ ಎಂದು ಬಾಲಕಿ ತಾಯಿ ಪೊಲೀಸರಲ್ಲಿ ಹೇಳಿದ್ದಾಳೆ.
ಮಗಳು ತಮ್ಮ ಜತೆಗಿರಲು ಇಷ್ಟಪಡದ ಪತಿ ಸದಾ ಈ ಕಾರಣಕ್ಕೆ ಜಗಳವಾಡುತ್ತಿದ್ದ ಎಂದು ಆರೋಪಿ ಪತ್ನಿ ಹೇಳಿದ್ದಾಳೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.