ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ಪತಿಯೋರ್ವ ಪತ್ನಿಯನ್ನು ಎರಡು ಡಜನ್ ಬಾರಿ ತಿವಿದ ಅಮಾನುಷ ಘಟನೆ ದೆಹಲಿಯ ವಿಕಾಸ್ ವಿಹಾರ್ನಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಬಳಿಕ ಆತ ತನ್ನ ಮಣಿಕಟ್ಟಿನ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಘಟನೆಯಲ್ಲಿ ಪತ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಚಿಂತಾಜನಕ ಸ್ಥಿತಿಯಲ್ಲಿರುವ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪ್ರೇಮ್ ಸಿಂಗ್ ಶನಿವಾರ ತನ್ನ ಪತ್ನಿ ಸುಮನ್ ಹತ್ಯೆಗೆ ಯೋಜನೆ ರೂಪಿಸಿ 8 ಮತ್ತು 12 ವರ್ಷದ ತನ್ನ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದ.
ಭಾನುವಾರ ಮುಂಜಾನೆ ಸುಮನ್ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಸಹಾಯಕ್ಕೆ ಬರುವಷ್ಟರಲ್ಲಿ ಆಕೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಳು.
ಸುಮನ್ ಪತಿ ಚಾಕುವಿನಿಂದ ಆಕೆಗೆ ಇರಿದಿದ್ದಾನೆ. ನಾವು ಕದ ಒಡೆದು ಒಳ ಹೋದಾಗ ಆಕೆಯಾಗಲೇ ಕೊನೆಯುಸಿರೆಳೆಯುತ್ತಿದ್ದಳು. ಆಕೆಯ ಗಂಡ ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡಿದ್ದ. ಆತನ ಕೈಯ್ಯಿಂದ ರಕ್ತ ಹರಿಯುತ್ತಿತ್ತು. ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದೆವು. ಆದರೆ ಆಕೆ ಬದುಕುಳಿಯಲಿಲ್ಲ ಎಂದು ನೆರೆಹೊರೆಯವರು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ದುಷ್ಕೃತ್ಯವನ್ನೆಸೆದಾಗ ಪ್ರೇಮ್ ಸಿಂಗ್ ಕುಡಿದ ಮತ್ತಿನಲ್ಲಿದ್ದ ಎಂದು ತಿಳಿದು ಬಂದಿದ್ದು, ದಂಪತಿ ಮಧ್ಯೆ ಸದಾ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.