Publish Date: Fri, 23 Jun 2017 (15:40 IST)
Updated Date: Fri, 23 Jun 2017 (15:44 IST)
ನವದೆಹಲಿ:ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ಆರೋಪಿಸಿ ಮೂರು ಮಂದಿಯ ಮೇಲೆ ಸಹ ಪ್ರಯಾಣಿಕರು ಹಲ್ಲೆ ನಡೆಸಿ, ರೈಲಿನಲ್ಲೆ ಆರಂಭವಾದ ಮಾರಾಮಾರಿ ಓರ್ವನ ಸಾವಿನಲ್ಲಿ ಅಂತ್ಯವಾದ ಘಟನೆ ಘಾಜಿಯಾಬಾದ್-ದೆಹಲಿ-ಮಥುರಾ ರೈಲಿನಲ್ಲಿ ನಡೆದಿದೆ.
ಹರಿಯಾಣದ ವಲ್ಲಬ್ಘರ್ದ ನಿವಾಸಿ ಜುನೈದ್ ತನ್ನ ಇಬ್ಬರು ಸೋದರ ಸಂಬಂಧಿಗಳಾದ ಹಶೀಮ್ ಮತ್ತು ಶಕೀರ್ ಜತೆಗೆ ದೆಹಲಿಯ ಸದರ್ ಬಜಾರ್ನಲ್ಲಿ ಹಬ್ಬದ ಖರೀದಿ ಮುಗಿಸಿ ರೈಲಿನಲ್ಲಿ ಊರಿಗೆ ಮರಳುತ್ತಿದ್ದರು. ಓಖ್ಲಾ ನಿಲ್ದಾಣ ಸಮೀಪಿಸುತ್ತಿದ್ದ ವೇಳೆ ಆಸನಕ್ಕಾಗಿ ಈ ಮೂವರು ಹಾಗೂ ಮತ್ತೊಂದು ಗುಂಪಿನ ನಡುವೆ ಜಗಳವಾಗಿದೆ. ಮೂರು ಮಂದಿ ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ಗುಂಪಿನಲ್ಲಿದ್ದವರು ಆರೋಪಿಸಿದ್ದಾರೆ. ಜಗಳ ಹೆಚ್ಚಾಗಿ ಗುಂಪಿನಲ್ಲಿದ್ದವರು ಮೂವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಜುನೈದ್ ಎಂಬುವವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ರೈಲ್ವೆ ಪೊಲೀಸರು, ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ನಡೆದ ಜಗಳವಲ್ಲ, ಕೇವಲ ಆಸನಕ್ಕಾಗಿ ನಡೆದ ಜಗಳ ಎಂದಿದ್ದಾರೆ.