ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರ ಹೊಸ ಗೀತೆಯೊಂದು ಯುಟ್ಯೂಬ್ನಲ್ಲಿ ಈ ವಾರ ಬಿಡುಗಡೆಯಾಗಿದೆ. ಪಂಜಾಬ್ನಲ್ಲಿ ಮುಂದಿನ ವರ್ಷ ಚುನಾವಣೆ ಇರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಅಕಾಲಿ ದಳವನ್ನು ಪಕ್ಷವು ಹೇಗೆ ಗುರಿಯಾಗಿಸಿದೆ ಎನ್ನುವುದಕ್ಕೆ ಇದು ಸಂಕೇತವಾಗಿದೆ.
ವಿಶ್ವಾಸ್ ಈ ಗೀತೆಯನ್ನು ಬರೆದು, ಸಂಕಲನ ಮಾಡಿ ಸ್ವತಃ ಹಾಡಿದ್ದಾರೆ. ಪಂಜಾಬ್ ಅನ್ನು ಕಾಡುವ ಮಾದಕವಸ್ತು ಸಮಸ್ಯೆಯ ಬಗ್ಗೆ ಇದರಲ್ಲಿ ಗಮನಸೆಳೆಯಲಾಗಿದ್ದು, ರಾಜ್ಯವನ್ನು ಆಳುವ ಬಾದಲ್ಗಳನ್ನು ಗುರಿಯಾಗಿಸಲಾಗಿದೆ. ಮೇ 8ರಂದು ಬಿಡುಗಡೆಯಾದ ಗೀತೆ ವೈರಲ್ ಆಗಿದ್ದು, 32,000 ವೀಕ್ಷಕರು ವೀಕ್ಷಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇದಕ್ಕೆ ಮಸ್ಟ್ ವಾಚ್ ರೇಟಿಂಗ್ ನೀಡಿದ್ದು, ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಬಾದಲ್ಗಳು ನಮ್ಮ ರಸ್ತೆಗಳನ್ನು, ಕಾಲುವೆಗಳನ್ನು ಹಾಳುಮಾಡಿದರು, ನದಿಗಳಿಂದ ಎಲ್ಲ ಮರಳನ್ನು ಬಗೆದುತೆಗೆದರು ಎಂದು ಕುಮಾರ್ ವಿಶ್ವಾಸ್ ಪಂಜಾಬಿಯಲ್ಲಿ ಹಾಡುತ್ತಾರೆ. ಓ, ಜಾಟರೇ, ಮಾದಕವಸ್ತುಗಳನ್ನು ತ್ಯಜಿಸಿ, ನಿಮ್ಮ ಪುಟ್ಟ ಪುತ್ರಿ ನಿಮಗೆ ಮನವಿ ಮಾಡುತ್ತದೆ ಎಂದು ವಿಶ್ವಾಸ್ ಹಾಡುತ್ತಾರೆ.
ದೆಹಲಿಯಲ್ಲಿ ಭರ್ಜರಿ ಗೆಲುವು ಗಳಿಸಿದ ಕೇಜ್ರಿವಾಲ್ ಎಎಪಿ ಪಕ್ಷವು ಪಂಜಾಬ್ ಮೇಲೆ ಕಣ್ಣಿರಿಸಿದೆ. ಪಂಜಾಬ್ನಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನಾಲ್ಕು ಸೀಟುಗಳನ್ನು ದಕ್ಕಿಸಿಕೊಟ್ಟಿತ್ತು. ಮಾದಕವಸ್ತು ಪಿಡುಗು ಚುನಾವಣೆಯ ದೊಡ್ಡ ವಿಷಯವಾಗಿದ್ದು, ಬಾದಲ್ ಸರ್ಕಾರಕ್ಕೆ ಎಎಪಿ ದೊಡ್ಡ ಸವಾಲಾಗಿ ಪರಿಣಮಿಸಿದೆ.